ಪುತ್ತೂರು : ಶ್ರೇಷ್ಠ ಸ್ಟುಡಿಯೋಸ್ ರವರು ಪಜ್ಜೆ ಡಿಸೈನ್ಸ್ ಸಹಯೋಗದೊಂದಿಗೆ ಮತ್ತು ಪುತ್ತಿಲ ಪರಿವಾರದ ಸಂಪೂರ್ಣ ಸಹಕಾರದೊಂದಿಗೆ ಅರ್ಪಿಸುತ್ತಿರುವ ‘ಭಕ್ತಿಚಿಗುರು’ ಎಂಬ ‘ಶ್ರೀ ಭಗವದ್ಗೀತೆಯ ಶ್ಲೋಕ ಕಂಠಪಾಠ’ ಸ್ಪರ್ಧೆಯ ಶೀರ್ಷಿಕೆಯನ್ನು ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವದ ಆಧಾರದ ಮೇಲೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲಿನಲ್ಲೂ ಇತಿಹಾಸ ಸೃಷ್ಟಿಸಿದ ಅರುಣ್ ಕುಮಾರ್ ಪುತ್ತಿಲ ಅವರು ಬಿಡುಗಡೆಗೊಳಿಸಿದರು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಹಿಂದೂ ಧರ್ಮದ ಪವಿತ್ರ ಗ್ರಂಥ ಶ್ರೀ ಭಗವದ್ಗೀತೆಯನ್ನು ಹಿಂದೂಗಳಾದ ನಾವೆಲ್ಲರೂ ಓದುವುದು ಅತ್ಯಗತ್ಯವಾಗಿರುವ ಈ ಕಾಲಘಟ್ಟದಲ್ಲಿ ನಮ್ಮ ಮಕ್ಕಳಿಗೂ ಭಗವದ್ಗೀತೆಯನ್ನು ಓದಲು ಕಲಿಸುವುದರೊಂದಿಗೆ ಅದರ ಮಹತ್ವದ ಬಗ್ಗೆಯೂ ತಿಳಿಸುವ ಪ್ರಯತ್ನ ನಮ್ಮದಾಗಬೇಕಿದೆ.

ಲವ್ ಜಿಹಾದ್ ಹೆಸರಿನಲ್ಲಿ ನಮ್ಮ ಧರ್ಮವನ್ನು ದುರ್ಬಲಗೊಳಿಸುವ ಷಡ್ಯಂತ್ರದ ವಿರುದ್ಧ ನಮ್ಮ ಮಕ್ಕಳನ್ನು ಹಿಂದೂ ಧರ್ಮದ ಅಮೂಲ್ಯ ಧ್ಯೇಯೋದ್ದೇಶಗಳ ಬಗೆಗಿನ ಅರಿವು ಮೂಡಿಸಿ, ಧರ್ಮ ಜಾಗೃತಿಗೊಳಿಸುವ ಯೋಜನೆಯಡಿಯಲ್ಲಿ ಇಡುತ್ತಿರುವ ಸಣ್ಣ ಹೆಜ್ಜೆಯಿದು ಎಂದು ಈ ಸ್ಪರ್ಧೆಯ ಆಯೋಜಕರಾದ ಪಜ್ಜೆ ಡಿಸೈನ್ಸ್ ನ ಮಾಲಕ ಶಶಿ ಆಚಾರ್ ಕನ್ಯಾನ ತಿಳಿಸಿದರು.
ಸ್ಪರ್ಧೆಯ ನಿಯಮಗಳು ಮತ್ತು ಹೆಚ್ಚಿನ ಮಾಹಿತಿಗಳನ್ನು ಶ್ರೇಷ್ಠ ಸ್ಟುಡಿಯೋಸ್ ರವರ ಸೋಶಿಯಲ್ ಮೀಡಿಯಾ ಪೇಜ್ ಗಳಲ್ಲಿ ತಿಳಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರದ ಸದಸ್ಯರಾದ ಮನೀಶ್ ಬನ್ನೂರು, ಪ್ರಜ್ವಲ್ ಮಿತ್ತೂರು ಮತ್ತಿತರರು ಉಪಸ್ಥಿತರಿದ್ದರು.

























