ಮಂಗಳೂರು: ಉಡುಪಿ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ನಡೆದಿದೆ ಎನ್ನಲಾದ ಪ್ರಕರಣದ ತನಿಖೆ ಮುಂದುವರಿದಿದೆ. ಘಟನೆಯ ಅಸಲಿ ಸತ್ಯ ಬಯಲಾಗೋ ಮುಂಚೆ ಈ ಪ್ರಕರಣಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾದ ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಉಡುಪಿ ಘಟನೆಯನ್ನು ಸರ್ಕಾರ ಬಹಳ ಸರಳವಾಗಿ ತೆಗೆದುಕೊಂಡಿದೆ. ಅಂದ್ರೆ ಸಂಪೂರ್ಣವಾಗಿ ಮುಚ್ಚಿ ಹಾಕಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ. ಇದು ಒಂದು ದಿನ ನಡೆದ ಘಟನೆ ಅಲ್ಲ. ಅಲ್ಲಿಯ ವಿದ್ಯಾರ್ಥಿನಿಯರು ಹೇಳುವಂತೆ ಆರೇಳು ಬಾರಿ ಇಂತಹ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ಆಗಬೇಕಿತ್ತು. ಆದ್ರೆ ಈ ಘಟನೆಯನ್ನು ಪೊಲೀಸ್ ಇಲಾಖೆ ಮುಚ್ಚಿ ಹಾಕುವ ಯತ್ನ ಮಾಡಿದೆ ಎಂದು ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

ಇನ್ನು ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ನಡೆಯುವ ಘಟನೆಗಳು ಉಡುಪಿ ಪ್ರಕರಣದಲ್ಲೂ ನಡೆದಿದೆ. ಈ ಘಟನೆ ಕೇವಲ ಮೂರು ವಿದ್ಯಾರ್ಥಿನಿಗಳಿಂದ ನಡೆದಿದ್ದಲ್ಲ. ಇದರ ಹಿಂದೆ ಕೇರಳದ ಶಕ್ತಿಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ.


























