ಪುತ್ತೂರು : ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳ ಉದ್ಘಾಟನೆಗೆ ಪುತ್ತೂರು ಮೂಲದ ದಕ್ಷಿಣ ಭಾರತದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಅವರನ್ನು ಆಹ್ವಾನಿಸಲಾಗಿದೆ.
ಈ ನವೆಂಬರ್ 24, 25 ಮತ್ತು 26 ರಂದು ಕಂಬಳವನ್ನು ಆಯೋಜನೆ ಮಾಡಿದ್ದು, ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ.
ಮೂಲತಃ ಪುತ್ತೂರಿನವರೇ ಆಗಿರುವ ಅನುಷ್ಕಾ ಶೆಟ್ಟಿ ಕಂಬಳಾಭಿಮಾನಿಯೂ ಹೌದು. ಊರಿನ ಅಥವಾ ಕುಟುಂಬದ ಯಾವುದೇ ಕಾರ್ಯಕ್ರಮಗಳಿಗೂ ಸ್ವೀಟಿ ತಪ್ಪದೇ ಹಾಜರಿರುತ್ತಾರೆ. ದೈವ-ದೇವರುಗಳ ಕಾರ್ಯಗಳಿಗೆ ಅನುಷ್ಕ ಶೆಟ್ಟಿ ಮೊದಲ ಪ್ರಾಶಸ್ತ್ಯವನ್ನು ನೀಡುತ್ತಾರೆ.
ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ಆಯೋಜನೆಯಾಗಿದ್ದು, ಇದಕ್ಕಾಗಿ ಭಾರೀ ಸಿದ್ಧತೆ ಕೂಡ ಮಾಡಲಾಗುತ್ತಿದೆ.
ಈ ವರ್ಷ ತುಳು ಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಕಂಬಳ ಮಾಡಲು ಸಿದ್ದತೆ ನಡೆಯುತ್ತಿದೆ.
ರಾಜಧಾನಿಗೆ ಬರಲು ಕಂಬಳದ ಕೋಣಗಳು ಸಿದ್ದಗೊಂಡಿದ್ದು, ಸಿಲಿಕಾನ್ ಸಿಟಿ ಜನರಿಗೆ ಇದು ಕೊಂಚ ವಿಶೇಷ ಹಾಗೂ ವಿಭಿನ್ನ ಕ್ರೀಡೆ ಎನಿಸುವುದರಲ್ಲಿ ಸಂದೇಹವಿಲ್ಲ.
ಕಂಬಳ, ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ-ಪುಷ್ಟವಾಗಿ ಬೆಳಸಿದ ಕೋಣಗಳನ್ನ ಹಸನಾಗಿ ಹದ ಮಾಡಿ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ.
ಇದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕ್ರೀಡೆ.
‘ಬೆಂಗಳೂರು ಕಂಬಳ, ನಮ್ಮ ಕಂಬಳ’ ಎಂಬ ಶಿರ್ಷಿಕೆಯಡಿ ಕಂಬಳ ಆಯೋಜಿಸಲಾಗಿದ್ದು, ಸುಮಾರು 150 ಕೋಣಗಳು ಭಾಗಿಯಾಗಲಿವೆ ಎಂದು ಹೇಳಲಾಗುತ್ತಿದೆ.

























