ಉಡುಪಿ : ಜೀವನದ ಯಶಸ್ಸಿನ ಗುರಿ ಮುಟ್ಟಬೇಕು ಎಂಬ ಆಶಯದೊಂದಿಗೆ ಛಲ, ದಿಟ್ಟತನ, ಶ್ರಮದಿಂದ ಯುಪಿಎಸ್ಸಿ ತೇರ್ಗಡೆ ಹೊಂದುವ ಮೂಲಕ ಮೂರು ವರ್ಷದ ಮಗುವಿನ ತಾಯಿ ಉಡುಪಿ ಅಂಬಾಗಿಲು ನಿವಾಸಿ ನಿವೇದಿತಾ ಶೆಟ್ಟಿ ಸಾಧನೆ ಮಾಡಿದ್ದಾರೆ.
2022ರ ಸಾಲಿನ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯ ಪರಿಷ್ಕೃತ ಪಟ್ಟಿ ಬಿಡುಗಡೆಯಾಗಿದ್ದು, ನಿವೇದಿತ ಶೆಟ್ಟಿ ಅವರು ತೇರ್ಗಡೆಯಾಗಿದ್ದಾರೆ.
ನಿವೇದಿತ ಶೆಟ್ಟಿ ಉಡುಪಿ ಅಂಬಾಗಿಲಿನಲ್ಲಿರುವ ಪೆರ್ಡೂರು ಸದಾನಂದ ಶೆಟ್ಟಿ , ಸಮಿತಾ ಶೆಟ್ಟಿ ದಂಪತಿಯ ಪುತ್ರಿ.
ನಿವೇದಿತಾ ಅವರ ಪತಿ ದಿವಾಕರ್ ಶೆಟ್ಟಿ ಅವರು ಓಮನ್ನ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಿವೇದಿತಾ ಅವರು ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಕಲ್ಯಾಣಪುರ ಮಿಲಾಗ್ರಿಸ್ ಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ವಿದ್ಯೋದಯ ಕಾಲೇಜಿನಲ್ಲಿ ಪಡೆದಿದ್ದಾರೆ. ನಿಟ್ಟೆೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಮುಗಿಸಿ 4 ವರ್ಷ ಬೆಂಗಳೂರಿನ ಸಂಸ್ಥೆೆಯೊಂದರಲ್ಲಿ ವೆಬ್ ಡೆವಲಪರ್ ಆಗಿ ಕೆಲಸ ಮಾಡಿದ್ದರು. ಅನಂತರ ಸತತ ಪ್ರಯತ್ನದ ಫಲವಾಗಿ ಯುಪಿಎಸ್ಸಿ ತೇರ್ಗಡೆ ಹೊಂದಿದ್ದಾರೆ. 2019ರ ಪ್ರಯತ್ನದಲ್ಲಿ ಮೈನ್ಸ್ ಪರೀಕ್ಷೆ ಬರೆಯುವಾಗ ನಿವೇದಿತ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು. ಅನಂತರ ಮಗುವಿನ ಪೋಷಣೆ ಜೊತೆಗೆ ಯುಪಿಎಸ್ಸಿ ತಯಾರಿಯೂ ಮುಂದುವರಿಸಿ ಸಾಧನೆ ಶಿಖರವೇರಿದ್ದಾರೆ.
‘ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿರುವಾಗಲೇ ಯುಪಿಎಸ್ಸಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದೆ. ಸಾಮಾಜಿಕವಾಗಿ ತೊಡಗಿಸಿಕೊಂಡು ಕೆಲಸ ನಿರ್ವಹಿಸಬೇಕು. ಜನರ ಸೇವೆ ಮಾಡಲು ಯುಪಿಎಸ್ಸಿ ಒಳ್ಳೆಯ ಆಯ್ಕೆ ಎನಿಸಿತು. ಕೆಲಸ ಮಾಡುತ್ತಿರುವಾಗಲೆ ತಯಾರಿ ಮಾಡಿಕೊಂಡಿದ್ದೆ. ಕೋಚಿಂಗ್ ಇಲ್ಲದೆ ಸ್ವಯಂ ಅಭ್ಯಾಸಕ್ಕೆ ಸ್ವಲ್ಪ ಕಾಲವಕಾಶ ಕಡಿಮೆಯಾಗುತ್ತಿದ್ದ ಕಾರಣ ಕೆಲಸವನ್ನು ಬಿಟ್ಟು ಪೂರ್ಣ ಪ್ರಮಾಣದಲ್ಲಿ ಮಗುವಿನ ಪೋಷಣೆ ಜೊತೆಗೆ ತಯಾರಿ ಆರಂಭಿಸಿದೆ.
ಯುಪಿಎಸ್ಸಿ ಮಾದರಿ ಪ್ರಶ್ನೆ ಪತ್ರಿಕೆ, ನಿತ್ಯ ದಿನಪತ್ರಿಕೆಗಳ ಓದು, ಯುಪಿಎಸ್ಸಿ ಸಂಬಂಧಿತ ಪುಸ್ತಕಗಳನ್ನು ಅಭ್ಯಾಸ ಮಾಡುತ್ತಿದ್ದೆ. ತಂದೆ, ತಾಯಿ, ನನ್ನ ಪತಿ ಈ ಯಶಸ್ಸಿಗೆ ಸಂಪೂರ್ಣ ಪ್ರೋತ್ಸಾಹ ನೀಡಿದ್ದಾರೆ’.
– ನಿವೇದಿತಾ ಶೆಟ್ಟಿ, ಯುಪಿಎಸ್ಸಿ ಸಾಧಕಿ.


























