ಪುತ್ತೂರು : ಹಾವೇರಿ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಂಭವಿಸಿದ್ದ ಪಟಾಕಿ ದುರಂತಗಳ ಹಿನ್ನೆಲೆಯಲ್ಲಿ ಪಟಾಕಿ ಮಳಿಗೆಗಳನ್ನು ಮೈದಾನಗಳಲ್ಲಿಯೇ ಹಾಕುವಂತೆ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಪುತ್ತೂರಿನಲ್ಲಿ ಕಿಲ್ಲೆ ಮೈದಾನ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಪಟಾಕಿ ಮಳಿಗೆಗಳಿಗಾಗಿ ಜಾಗ ಗುರುತಿಸಲಾಗಿದೆ.
ಪುತ್ತೂರು ನಗರಸಭೆಯಲ್ಲಿ ತಹಶೀಲ್ದಾರ್ ಶಿವಶಂಕರ್ ಜೆ. ಅವರ ಅಧ್ಯಕ್ಷತೆಯಲ್ಲಿ ಪಟಾಕಿ ಮಳಿಗೆ ವ್ಯಾಪಾರಸ್ಥರ ಸಭೆಯಲ್ಲಿ ಈ ಸೂಚನೆಗಳನ್ನು ನೀಡಲಾಗಿದೆ.
ಹಸಿರು ಪಟಾಕಿಗಳನ್ನು ಹೊರತು ಪಡಿಸಿ ಉಳಿದ ನಿಷೇಧಿತ ಯಾವುದೇ ರೀತಿಯ ಪಟಾಕಿಗಳು ಕಂಡು ಬಂದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ಸಂಬಂಧಪಟ್ಟ ಮಾಲಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ರಾಜ್ಯ ಪೌರಾಡಳಿತ ನಿರ್ದೇಶನಾಲಯ ನಗರ ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ಸೂಚನೆ ನೀಡಿದೆ.

9 ಪಟಾಕಿ ಮಳಿಗೆಗಳು ಮೈದಾನಕ್ಕೆ ಶಿಫ್ಟ್..!!
ತಾತ್ಕಾಲಿಕವಾಗಿ ಅಲ್ಲಲ್ಲಿ ಸ್ಟಾಲ್ ಹಾಕಿ ಪಟಾಕಿ ಮಾರಾಟ ಮಾಡುವ ಮಳಿಗೆಗಳಿಗೆ ನಂಬರ್ ನೀಡಿ ಮೈದಾನದಲ್ಲಿ ಪಟಾಕಿ ಮಾರಾಟ ಮಾಡಲು ಎನ್.ಒ.ಸಿ ನೀಡಲಾಗಿದೆ.
ಈ ನಿಟ್ಟಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಗದ್ದೆಯಲ್ಲಿ 5 ಮತ್ತು ಕಿಲ್ಲೆ ಮೈದಾನದಲ್ಲಿ 4 ಪಟಾಕಿ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಸ್ಥಳವನ್ನು ಏಲಂ ಮೂಲಕ ಮಳಿಗೆ ಮಾಲಕರು ಪಡೆದುಕೊಂಡಿದ್ದಾರೆ.
ಖಾಯಂ ಮಳಿಗೆಗಳು ಶಿಫ್ಟ್..!
ತಾತ್ಕಾಲಿಕ ಪಟಾಕಿ ಮಳಿಗೆಗಳನ್ನು ಮೈದಾನಕ್ಕೆ ಶಿಫ್ಟ್ ಮಾಡಲು ಸೂಚಿಸಲಾಗಿದೆ. ಆದರೇ ಖಾಯಂ ಪರವಾನಿಗೆ ಇರುವ ಪಟಾಕಿ ಮಳಿಗೆಗಳನ್ನೂ ಮೈದಾನಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ಈ ನಿಟ್ಟಿನಲ್ಲಿ ಪಟಾಕಿ ಮಾರಾಟದ ಖಾಯಂ ಪರವಾನಿಗೆ ಹೊಂದಿರುವ ಮಹಿಳಾ ಪೊಲೀಸ್ ಸ್ಟೇಷನ್ ಬಳಿಯ ಶಿವಕೃಪ ಜನರಲ್ ಸ್ಟೋರ್ ನ ನಾಗೇಶ್ ರಾವ್, ದರ್ಬೆ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಕಟ್ಟಡದಲ್ಲಿರುವ ಡೇವಿಡ್ ಮಾಡ್ತಾ ಅವರ ಮಳಿಗೆ, ಪುತ್ತೂರು ಬಸ್ ನಿಲ್ದಾಣದ ಬಳಿಯ ಮಹಾಲಸ ಮೆಡಿಕಲ್ ಕಟ್ಟಡದಲ್ಲಿರುವ ವೆಂಕಟೇಶ್ ಪೈ ಅವರ ಮಳಿಗೆ, ಕೋರ್ಟ್ ರಸ್ತೆಯಲ್ಲಿರುವ ವರದರಾಜ ಪೈ ಅವರ ಮಳಿಗೆಯನ್ನು ಮೈದಾನಕ್ಕೆ ಸ್ಥಳಾಂತರಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

























