ಹಾಸನ : ಅಭಿಮನ್ಯು ಆನೆ ಅಂಡ್ ಟೀಮ್ ಕಾರ್ಯಾಚರಣೆಗಿಳಿದ ಎರಡೇ ಗಂಟೆಯಲ್ಲೇ ಪುಂಡಾನೆ ಒಂದನ್ನು ಸೆರೆ ಹಿಡಿದಿವೆ. ಜಿಲ್ಲೆಯ ಆಲೂರು ತಾಲೂಕಿನ ನಲ್ಲೂರು ಗ್ರಾಮದ ಸಾರಾ ಎಸ್ಟೇಟ್ನಲ್ಲಿ ಒಂಟಿ ಸಲಗವನ್ನು ಹಿಡಿಯಲಾಗಿದೆ.
ಅರ್ಜುನ ಆನೆ ಮೃತಪಟ್ಟ ಮೇಲೆ ಕಾಡಾನೆ ಹಿಡಿಯುವ ಕಾರ್ಯಾಚರಣೆಗೆ ಬ್ರೇಕ್ ನೀಡಲಾಗಿತ್ತು. ಇಂದು ಅಭಿಮನ್ಯು ಅಂಡ್ ಟೀಮ್ನಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾರ್ಯಾಚರಣೆಗಿಳಿದ ಎರಡೇ ಗಂಟೆಯಲ್ಲಿ ಪುಂಡಾನೆ ಸೆರೆ ಸಿಕ್ಕಿದೆ.
ಅಭಿಮನ್ಯು ಟೀಮ್ನಿಂದ ತಪ್ಪಿಸಿಕೊಳ್ಳಲು ಪುಂಡಾನೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿತ್ತು. ಆದರೆ ಯೋಜನೆಯಂತೆ ಪುಂಡಾನೆಯ ಆಟವನ್ನು ಅಭಿಮನ್ಯು ನಡೆಯಲು ಬಿಡಲಿಲ್ಲ. ಹಾಗೊಂದು ಹೀಗೊಂದು ಪುಂಡಾನೆಗೆ ಗುದ್ದಿ ಒಂದು ಕಡೆ ನಿಲ್ಲಿಸಿತು. ಬಳಿಕ ದೊಡ್ಡದಾದ ಹಗ್ಗಗಳಿಂದ ಕಟ್ಟಿಹಾಕಲಾಗಿತ್ತು.
ಹಗ್ಗ ಹರಿದುಕೊಳ್ಳಲು ಪುಂಡಾನೆ ಸರ್ವ ಪ್ರಯತ್ನ ಮಾಡಿತು. ಆದರೆ ಸುತ್ತಲೂ ಅಭಿಮನ್ಯು ಟೀಮ್ ಹಾಗೂ ಸಿಬ್ಬಂದಿ ನಿಂತಿದ್ದರಿಂದ ಬಿಡಿಸಿಕೊಳ್ಳಲು ವಿಫಲ ಯತ್ನ ಮಾಡಿದಂತೆ ಆಯಿತು. ಅಭಿಮನ್ಯುವಿನ ಬಲಕ್ಕೆ ಹೆದರಿ ಪುಂಡಾನೆ ಸುಮ್ಮನಾಯಿತು. ಇಂದಿನಿಂದ ಅಭಿಮನ್ಯು ನೇತೃತ್ವದಲ್ಲಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರೆಯಲಿದೆ.


























