ಬಂಟ್ವಾಳ : ತಾಲೂಕಿನ ಲೊರೆಟ್ರೊಪದವು ಸಮೀಪದ ತುಂಡುಪದವು ಎಂಬಲ್ಲಿ ನಡೆದ ದುರ್ಘಟನೆಯೊಂದರಲ್ಲಿ ದಂಪತಿ ಬೆಂಕಿಗೆ ಆಹುತಿಯಾಗಿದ್ದಾರೆ.

ಮನೆಯ ಹೊರಗೆ ಕಸಕಡ್ಡಿಗಳಿಗೆ ಬೆಂಕಿ ಹಚ್ಚಲು ಹೋಗಿ ಈ ಘಟನೆ ಸಂಭವಿಸಿರಬಹುದು ಎನ್ನಲಾಗಿದ್ದು, ಗಿಲ್ಬರ್ಟ್ ಕಾರ್ಲೊ ಮತ್ತು ಕ್ರಿಸ್ಟೀನ್ ಕಾರ್ಲೊ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಮ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತುಂಡುಪದವು ಎಂಬಲ್ಲಿ ಗಿಲ್ಬರ್ಟ್ ಕಾರ್ಲೊ (78) ಮತ್ತು ಕ್ರಿಸ್ಟೀನ್ ಕಾರ್ಲೊ (70) ವಾಸವಾಗಿದ್ದು, ಅವರ ಮೂವರು ಹೆಣ್ಣುಮಕ್ಕಳಲ್ಲಿ ಇಬ್ಬರು ಹೊರದೇಶದಲ್ಲಿ ಹಾಗೂ ಒಬ್ಬರು ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಭಾನುವಾರ ಮಧ್ಯಾಹ್ನದ ವೇಳೆ ಮನೆ ಪಕ್ಕ ಕಸಕ್ಕೆಂದು ಹಾಕಿದ ಬೆಂಕಿ ವ್ಯಾಪಿಸಿ ಈ ಅವಘಡ ಸಂಭವಿಸಿರಬಹುದು ಎನ್ನಲಾಗಿದೆ.
ಬೆಂಕಿ ನಂದಿಸಲು ಹೋದ ಮಹಿಳೆ ಹಾಗೂ ಅವರನ್ನು ರಕ್ಷಿಸಲು ಹೋದ ಪತಿ ಇಬ್ಬರೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದಾರೆ. ಅಕ್ಕಪಕ್ಕದಲ್ಲಿರುವ ಮನೆಯವರಿಗೆ ವಿಷಯ ಗೊತ್ತಾಗುವ ಮೊದಲೇ ಇಬ್ಬರೂ ಅಸುನೀಗಿದ್ದಾರೆ. ಕೂಡಲೇ ಅಗ್ನಿಶಾಮಕದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬೆಂಕಿಯನ್ನು ಸ್ಥಳೀಯರು ನಂದಿಸಿದ್ದು, ಆ ಹೊತ್ತಿಗಾಗಲೇ ಇಬ್ಬರೂ ಸಾವನ್ನಪ್ಪಿದ್ದರು.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

























