ಬೆಂಗಳೂರು : ಜೈಲಿನಲ್ಲಿರುವ ಕೈದಿಗಳನ್ನು ಉಗ್ರ ಕೃತ್ಯಕ್ಕೆ ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೇರಿದಂತೆ ಏಳು ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಶೋಧಕಾರ್ಯ ನಡೆಸಿದೆ.
ಎನ್ಐಎ ಅಧಿಕಾರಿಗಳು ನಿನ್ನೆ (ಮಾ.04) ರಾತ್ರಿ ಪರಪ್ಪನ ಅಗ್ರಹಾರದಲ್ಲಿ ಪರಿಶೀಲನೆ ನಡೆಸಿದ್ದಾರೆ. ಬೆಳಗಿನ ಜಾವ 6 ಗಂಟೆವರೆಗೂ ತನಿಖೆ ನಡೆಸಿದ್ದು, ನಜೀರ್ ಸೇರಿದಂತೆ ಅನೇಕರ ವಿಚಾರಣೆ ನಡೆಸಿದ್ದಾರೆ. ಕೇಂದ್ರ ಅಪರಾಧ ವಿಭಾಗ ಅಧಿಕಾರಿಗಳು 2022ರ ಜುಲೈನಲ್ಲಿ ರಾಜ್ಯ ರಾಜಧಾನಿಯ ತಿಲಕ ನಗರದ ಬಹು ಮಹಡಿ ಕಟ್ಟಡದ ಮೂರನೇ ಮಹಡಿಯಲ್ಲಿರುವ ಫ್ಲ್ಯಾಟ್ನಲ್ಲಿ ವಾಸವಾಗಿದ್ದ, ಲಷ್ಕರ್-ಎ-ತೊಯ್ಬಾ (LeT) ಸಂಘಟನೆ ಜೊತೆ ನಂಟು ಹೊಂದಿದ್ದ ಅಖ್ತರ್ ಹುಸೇನ್ ಎಂಬ ಶಂಕಿತ ಉಗ್ರನನ್ನು ಬಂಧಿಸಿದ್ದರು.
ಕಳೆದ ವರ್ಷ ಜುಲೈ 18 ರಂದು ಸಿಸಿಬಿ ಅಧಿಕಾರಿಗಳು ಆರ್ಟಿ ನಗರದ ಸುಲ್ತಾನ್ ಪಾಳ್ಯದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿ ಐವರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದರು. ಸಿಸಿಬಿ ಪೊಲೀಸರ ಪ್ರಕಾರ ಬಂಧಿತ ಆರೋಪಿಗಳು ನಗರದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದರು. ಬಂಧಿತ ಆರೋಪಿಗಳಲ್ಲಿ ಒಬ್ಬನ ಮನೆಯಲ್ಲಿ ನಾಲ್ಕು ಜೀವಂತ ಗ್ರೆನೇಡ್ಗಳನ್ನು ಪತ್ತೆಯಾಗಿದ್ದವು. ಹಾಗೆ 7 ನಾಡ ಬಂದೂಕುಗಳು ಮತ್ತು 45 ಸುತ್ತು ಜೀವಂತ ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಏನಿದು ಉಗ್ರ ಕೃತ್ಯಕ್ಕೆ ಸಹ ಕೈದಿಗಳ ಬಳಕೆ
ಶಂಕಿತ ಉಗ್ರ ಜುನೈದ್ ಮತ್ತು ಈತನ ಐವರು ಸಹಚರರು 2017ರಲ್ಲಿ ಉದ್ಯಮಿಯೊಬ್ಬರ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದರು. 2008ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ್ದ ಸರಣಿ ಸ್ಫೋಟದ ಆರೋಪಿ ಟಿ.ನಜೀರ್, ಪರಪ್ಪನ ಅಗ್ರಹಾರದಲ್ಲಿದ್ದ ಜುನೈದ್ ಅಹಮದ್ ಸಂಪರ್ಕಕ್ಕೆ ಬಂದಿದ್ದನು. ಬಳಿಕ ಜುನೈದ್ ತನ್ನ ಐವರು ಸಹಚರರ ಬ್ರೈನ್ ವಾಶ್ ಮಾಡಿ ಉಗ್ರವಾದಕ್ಕೆ ಪ್ರಚೋದನೆ ನೀಡಿದನು.
ಜೈಲಿನಿಂದ ಹೊರಬಂದ ನಂತರ, ಜುನೈದ್ ನಜೀರ್ ಆದೇಶದಂತೆ ಭಯೋತ್ಪಾದಕ ಚಟುವಟಿಕೆಗಳನ್ನು ಆರಂಭಿಸಿದನು. ಅಲ್ಲದೆ ತನ್ನ ಸಹಚರರಿಗೆ ಕೆಲವರ ಮೂಲಕ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸಿದ್ದನು. ಜುನೈದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಉಳಿದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ನಜೀರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಿಸಿಬಿ ಪೊಲೀಸರು ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಿದ್ದಾರೆ. ಸದ್ಯ ಎನ್ಐಎ ಈ ಪ್ರಕರಣದ ತನಿಖೆ ನಡೆಸುತ್ತಿದೆ.


























