ಮಂಗಳೂರು : ಪಿಲಿಕುಳ ಜೈವಿಕ ಉದ್ಯಾನವನದಿಂದ ಬೃಹತ್ ಕಾಳಿಂಗ ಸರ್ಪ ತಪ್ಪಿಸಿಕೊಂಡ ಘಟನೆ ನಡೆದಿದೆ.
ಜೈವಿಕ ಉದ್ಯಾನವನದ ಟಿಕೆಟ್ ಕೌಂಟರ್ ಬಳಿ ಬಂದಿದ್ದ ಕಾಳಿಂಗ ಸರ್ಪ ಕಂಡು ಜನರು ಹೌಹಾರಿದ್ದಾರೆ. ಬಳಿಕ ರಸ್ತೆ ದಾಟಿ ವಿಜ್ಞಾನ ಕೇಂದ್ರದತ್ತ ಸಾಗಿದ್ದು, ಸದ್ಯ ಕಾಳಿಂಗ ಸರ್ಪ ಹಿಡಿಯಲು ಸಿಬ್ಬಂದಿಗಳು ಕ್ರಮ ಕೈಗೊಂಡಿದ್ದಾರೆ. ಇನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕಾಳಿಂಗ ಸರ್ಪ ತಪ್ಪಿಸಿಕೊಂಡಿದೆ ಎಂಬ ಆರೋಪಗಳು ಕೇಳಿಬಂದಿದೆ.
2004ರಲ್ಲಿ ಉದ್ಘಾಟನೆಗೊಂಡಿದ್ದ ಪಿಲಿಕುಳ ಉದ್ಯಾನವನಕ್ಕೆ ಇತ್ತೀಚೆಗೆ ಅಳಿವಿನಂಚಿನಲ್ಲಿರುವ ತೋಳಗಳು ಸೇರ್ಪಡೆಯಾಗಿತ್ತು. ಆಂಧ್ರದ ವಿಶಾಖಪಟ್ಟಣದ ಮೃಗಾಲಯದಿಂದ ಈ ತೋಳಗಳನ್ನು ತರಿಸಲಾಗಿತ್ತು.
ಇನ್ನು ಇಲ್ಲಿ ಹೊಸ ಜಗತ್ತಿನ ಮಂಗಗಳೆಂದು ಕರೆಯುವ ನಾಲ್ಕು ಜೊತೆ ಅಳಿಲು ಮಂಗವು ಇದೆ. ಇವು ಮಧ್ಯ ಹಾಗೂ ದಕ್ಷಿಣ ಅಮೆರಿಕಾದಲ್ಲಿ ಕಂಡು ಬರುವ ಚಿಕ್ಕ ಜಾತಿಯ ಮಂಗಗಳಾಗಿವೆ. ದೇಶದ ಪ್ರಮುಖ ಮೃಗಾಲಯಗಳಲ್ಲಿ ಒಂದಾಗಿರುವ ಪಿಲಿಕುಳ ಉದ್ಯಾನವನದಲ್ಲಿ ಇಂದು ಕಾಳಿಂಗ ಸರ್ಪ ತಪ್ಪಿಸಿಕೊಂಡಿದೆ.

























