ಶಿವಮೊಗ್ಗ : ಅಮಿತ್ ಶಾ ಅವರ ಅಪೇಕ್ಷೆ ನಾನು ಚುನಾವಣೆಗೆ ಸ್ಪರ್ಧಿಸೋದೆ ಆಗಿತ್ತು ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತಹ ದೊಡ್ಡ ಮನುಷ್ಯರು ದೆಹಲಿಗೆ ಕರೆದಾಗ ಗೌರವ ಕೊಟ್ಟು ಹೋಗಿದ್ದೆ. ಬಿಜೆಪಿಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಅಮಿತ್ ಶಾ ಮನೆಗೆ ಹೋಗಲು ಹೇಳಿದ್ದರು. ಅಮಿತ್ ಶಾ ಮನೆಯಲ್ಲಿ ಇರಲಿಲ್ಲ. ಅವರು ಭೇಟಿ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಬಳಿಕ ದೆಹಲಿಯಿಂದ ವಾಪಸ್ ಹೋಗೋದಾ ಎಂದು ಕೇಳಿದೆ. ಹೌದು ವಾಪಸ್ ಹೋಗು ಎಂದರು. ಅವರ ಅಭಿಪ್ರಾಯ ನಾನು ಬಂದು ಚುನಾವಣೆಗೆ ಸ್ಪರ್ಧಿಸುವುದೇ ಆಗಿತ್ತು. ಅದಕ್ಕೆ ನನ್ನನ್ನು ಅವರು ಭೇಟಿಯಾಗಲಿಲ್ಲ ಎಂದಿದ್ದಾರೆ.
ಕೇಂದ್ರದಲ್ಲಿ ಕುಟುಂಬ ರಾಜಕಾರಣ ಕಿತ್ತು ಒಗೆಯಬೇಕು ಅಂತಿದ್ದಾರೆ. ರಾಜ್ಯದಲ್ಲಿ ಕುಟುಂಬ ರಾಜಕಾರಣ ಬೆಳೆಯುತ್ತಿದೆ. ಕುಟುಂಬ ರಾಜಕಾರಣ ಕಿತ್ತೊಗೆಯಬೇಕು. ಅನೇಕ ಹಿಂದುತ್ವ ನಾಯಕರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಈ ಹಿಂದೆಯೇ ಅವರ ಜೊತೆ ಪ್ರಸ್ತಾಪ ಮಾಡಿದ್ದೆ. ನಾನು ಎಲ್ಲಾ ಅಂಶಗಳನ್ನು ಅವರ ಜೊತೆ ಚರ್ಚೆ ಮಾಡುವವನಿದ್ದೆ. ನನ್ನ ಪ್ರಶ್ನೆಗಳಿಗೆ ಅವರ ಬಳಿ ಉತ್ತರ ಇರಲಿಲ್ಲ. ಹೀಗಾಗಿಯೇ ಅವರು ನನ್ನ ಮನವೊಲಿಸಲು ಸಾಧ್ಯ ಆಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ನಾನು ನನ್ನ ನಿರ್ಧಾರದಂತೆ, ಕಾರ್ಯಕರ್ತರು ಬೆಂಬಲಿಗರ ಅಪೇಕ್ಷೆಯಂತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಇವನು ಚುನಾವಣೆಗೆ ನಿಲ್ಲೋದೇ ಸೂಕ್ತ ಎಂದು ಅವರಿಗೆ ಅನ್ನಿಸಿದೆ. ಅವರ ಅಪೇಕ್ಷೆಯಂತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಅಮಿತ್ ಶಾ ಕರೆದಾಗ ಏನು ಕೇಳ್ತಾರೆ.!? ಏನು ಉತ್ತರ ಕೊಡಬೇಕು ಎಂದು ತಯಾರಿ ಆಗಿದ್ದೆ. ಅಮಿತ್ ಶಾ ತುಂಬಾ ಚಾಣಕ್ಷ ನಿರ್ಧಾರ ಕೈಗೊಂಡಿದ್ದಾರೆ. ಅವರ ನಿರ್ಧಾರ ಸ್ವಾಗತಿಸುತ್ತೇನೆ. ಅವರ ನಿರ್ಧಾರ ಅಭಿನಂದಿಸುತ್ತೇನೆ ಎಂದಿದ್ದಾರೆ.
ಜನರು ಇಡೀ ರಾಜ್ಯದಿಂದ ನಾಮಪತ್ರ ವಾಪಸ್ ತೆಗೆದುಕೊಳ್ಳಬೇಡಿ ಎಂದು ಕರೆ ಮಾಡುತ್ತಿದ್ದಾರೆ. ಹಿರಿಯರು ಹೇಳಿದ್ರೆ ವಾಪಸ್ ಪಡೆಯುತ್ತಾರೆ ಎನ್ನುವ ಅನುಮಾನ ಕಾರ್ಯಕರ್ತರದ್ದು. ಭಗವಂತನ ನಿರ್ಣಯ ಸಹ ನಾನು ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂಬುದೇ ಇದೆ ಎನಿಸುತ್ತದೆ. ಇದಕ್ಕಾಗಿ ನಾನು ಭಗವಂತನಿಗೆ ನಮಸ್ಕರಿಸುತ್ತೇನೆ ಎಂದಿದ್ದಾರೆ.
ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿವೈವಿ ಷಡ್ಯಂತ್ರ ರಾಜಕಾರಣ ಮಾಡುತ್ತಿದ್ದಾರೆ. ಅವರ ಅಣ್ಣ ಸೋಲುವ ಭೀತಿ ಕಾಡುತ್ತಿದೆ. ಹೀಗಾಗಿಯೇ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ಮುಂದೆ ಯಾರು ಮನವೊಲಿಸುವ ಪ್ರಯತ್ನ ಮಾಡಲ್ಲ. ವಿಜಯೇಂದ್ರ ಪದೇ ಪದೇ ಮನವೊಲಿಸುತ್ತಾರೆ ಎಂದರೆ, ನಾನು ಬೇರೆ ಭಾಷೆಯಲ್ಲಿ ಹೇಳಬೇಕಾಗುತ್ತದೆ ಎಂದು ಅವರು ನೇರ ಎಚ್ಚರಿಕೆ ನೀಡಿದ್ದಾರೆ.
ರಾಜೇಶ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ರಾಧ ಮೋಹನ್ ದಾಸ್ ಅಗರ್ವಾಲ್ ನಮ್ಮ ಮನೆಗೆ ಬಂದಿದ್ದರು. ಅವರಿಗೆ ನನ್ನ ಎಲ್ಲಾ ಸಮಸ್ಯೆ ತಿಳಿಸಿದೆ. ನನಗೆ ಚುನಾವಣೆಗೆ ಸ್ಪರ್ಧೆ ಮಾಡಬೇಡಿ ಎಂದರು. ನಾನು ಪಕ್ಷ ಶುದ್ಧೀಕರಣಕ್ಕಾಗಿ ಸ್ಪರ್ಧೆ ಮಾಡುತ್ತೇನೆ. ಯತ್ನಾಳ್ ನನ್ನ ಬೇಡಿಕೆ ಸರಿ ಇದೆ ಎಂದಿದ್ದು, ಅವರೆಲ್ಲಾ ಅಪೇಕ್ಷೆಯಂತೆ ಸ್ಪರ್ಧೆ ಮಾಡಿ ಗೆಲ್ಲುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ನಿಂದ ಕಣಕ್ಕಿಳಿದ ಗೀತಾ ಶಿವರಾಜ್ಕುಮಾರ್ ನನ್ನ ಸಹೋದರಿ ಇದ್ದ ಹಾಗೆ. ಅವರ ಬಗ್ಗೆ ಯಾವುದೇ ವಿರೋಧವಿಲ್ಲ. ಯಡಿಯೂರಪ್ಪ ಹಾಗೂ ಅವರ ಮಕ್ಕಳು ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ. ಈ ಬಾರಿಯೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆ. ಈ ಹೊಂದಾಣಿಕೆ ರಾಜಕಾರಣ ಕೊನೆಯಾಗಬೇಕು. ನನಗೆ ಮತದಾರರೇ ಸ್ಟಾರ್ ಪ್ರಚಾರಕರು ಎಂದಿದ್ದಾರೆ.
ಮೋದಿ ಭಾವಚಿತ್ರ ಬಳಕೆ ವಿಚಾರವಾಗಿ, ಮೋದಿ ಏನು ಅವರಪ್ಪನ ಮನೆ ಆಸ್ತಿನಾ.!? ಮೋದಿ ವಿಶ್ವನಾಯಕ, ನನ್ನ ಎದೆ ಬಗೆದರೆ ಮೋದಿ ಕಾಣ್ತಾರೆ. ಅವರ ಎದೆ ಬಗೆದರೆ ಯಾರು ಕಾಣ್ತಾರೆ? ನಾನು ಗೆದ್ದ ನಂತರ ಮೋದಿಯವರಿಗೆ ಕೈ ಎತ್ತುವವನೇ ಎಂದು ಅವರು ಹೇಳಿದ್ದಾರೆ.


























