ಕುಂದಾಪುರ : ಆಕೆ ವಿಶೇಷ ಚೇತನ ಯುವತಿ. ತಾಯಿಯೇ ಆಸರೆ. ಮನೆಯಲ್ಲಿ ಅವರಿಬ್ಬರ ಹೊರತು ಬೇರೆ ಯಾರೂ ಇಲ್ಲ. ಹೆತ್ತಬ್ಬೆ ಕಣ್ಣೆದುರೇ ಕುಸಿದು ಬಿದ್ದು ತಲೆಗೆ ಗಾಯವಾಗಿ ಮೃತಪಟ್ಟರೂ ಏನೂ ಮಾಡಲಾಗದ ಸ್ಥಿತಿ ಆಕೆಯದು. ಮೂರು ದಿನಗಳ ಬಳಿಕ ಈ ವಿಚಾರ ಹೊರಪ್ರಪಂಚಕ್ಕೆ ತಿಳಿಯುವವರೆಗೂ ಅಮ್ಮನ ಕೊಳೆತ ಶವದೆದುರು ಇರಬೇಕಾದ ಅನಿವಾರ್ಯ ಆಕೆಯದಾಗಿತ್ತು!

ಗೋಪಾಡಿ ಗ್ರಾಮದ ಮೂಡು ಗೋಪಾಡಿಯ ದಾಸನಹಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮೇ.16ರ ರಾತ್ರಿ ಪತ್ತೆಯಾಗಿದ್ದು, ಆಕೆಯ ಮೃತದೇಹದೊಂದಿಗೆ ಬುದ್ಧಿಮಾಂದ್ಯ ಪುತ್ರಿಯಾದ ಪ್ರಗತಿ 72 (3 ದಿನ) ಗಂಟೆಗೂ ಹೆಚ್ಚು ಕಾಲ ಕಳೆದಿರುವುದು ಬೆಳಕಿಗೆ ಬಂದಿದೆ.

ದಾಸನಹಾಡಿಯ ಮನೆಯಲ್ಲಿ ಜಯಂತಿ ಅವರು ಪುತ್ರಿ ಪ್ರಗತಿಯೊಂದಿಗೆ ನೆಲೆಸಿದ್ದರು. ಈಕೆ ಚಿಕ್ಕಂದಿನಿಂದಲೇ ಬುದ್ಧಿಮಾಂದ್ಯರಾಗಿದ್ದು, ಇತ್ತೀಚೆಗೆ ಮಧುಮೇಹ ಹೆಚ್ಚಾಗಿದ್ದರಿಂದ ಒಂದು ಕಾಲನ್ನೇ ಕತ್ತರಿಸಲಾಗಿತ್ತು. ಅದಾಗಿಯೂ ಈಕೆಯನ್ನು ತಾಯಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಜಯಂತಿ ಅವರ ಪತಿ ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿದ್ದು, ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು.
ಮೇ.12ರಂದು ಜಯಂತಿ ಪುತ್ರಿಯ ಚೇತರಿಕೆಗಾಗಿ ಆನೆಗುಡ್ಡೆ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದರು. ಮೇ.13ರಂದು ಕೋಟೇಶ್ವರ ದೇವ ಸ್ಥಾನಕ್ಕೆ ತೆರಳಲು ಇರುವುದಾಗಿ ಸ್ಥಳೀಯ ರಿಕ್ಷಾ ಚಾಲಕರೊಬ್ಬರಿಗೆ ತಿಳಿಸಿದ್ದರು. ಆ ರಿಕ್ಷಾ ಚಾಲಕ ಮೇ.13ರಂದು ಬೆಳಗ್ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಅಂದರೆ ಮೇ.12ರ ಸಂಜೆಯಿಂದ ಮೇ.13ರ ಬೆಳಗ್ಗಿನ ನಡುವೆ ಬಿದ್ದು ಗಾಯಗೊಂಡು ಸಾವನ್ನಪ್ಪಿರಬಹುದೇ? ಎನ್ನುವ ಅನುಮಾನವಿದೆ.

3 ದಿನಗಳ ಕಾಲ ಆ ಮನೆಯಲ್ಲಿ ತಾಯಿಯ ಮೃತದೇಹದೊಂದಿಗೆ ನೀರು, ಆಹಾರವಿಲ್ಲದೆ ಪುತ್ರಿ ಪ್ರಗತಿ ಒಬ್ಬಳೇ ಕಳೆದಿರುವುದು ದಿಗ್ಭ್ರಮೆ ಮೂಡಿಸಿದೆ.
ಜಯಂತಿ ಬಿದ್ದು ಗಾಯಗೊಂಡಿದ್ದಲ್ಲದೆ, ಮಧುಮೇಹ, ಅಧಿಕ ರಕ್ತದೊತ್ತಡವೂ ಇದ್ದುದರಿಂದ ಗಂಭೀರಗೊಂಡು ಸಾವನ್ನಪ್ಪಿರಬಹುದು. ಬಾತ್ರೂಮ್ಗೆ ತೆರಳಿ, ಬರುವ ವೇಳೆ ಕಾಲು ಜಾರಿ ಬಿದ್ದಿರಬಹುದೇ? ಎನ್ನುವ ಸಂಶಯವೂ ಇದೆ. ಗೋಡೆ, ನೆಲದ ಮೇಲೆ ರಕ್ತದ ಕಲೆ ಪತ್ತೆಯಾಗಿದೆ.
ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾವಿಗೆ ನಿರ್ದಿಷ್ಟ ಕಾರಣವೇನೆಂದು ತಿಳಿದುಬರಬಹುದು.
3 ದಿನಗಳಿಂದ ಮನೆಯ ಗೇಟು ತೆರೆಯದ್ದನ್ನು ಗಮನಿಸಿದ ಅಕ್ಕ-ಪಕ್ಕದ ಮನೆಯವರು ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಮೇ.16ರ ರಾತ್ರಿ ವಿಪರೀತ ದುರ್ವಾಸನೆ ಬಂದಿದ್ದರಿಂದ ಸ್ಥಳೀಯರು ಗೋಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ ಶೆಟ್ಟಿ ಅವರಿಗೆ ತಿಳಿಸಿದ್ದು, ಅವರು ಸ್ಥಳೀಯರೊಂದಿಗೆ ಸಂಬಂಧಿಕರನ್ನು ಪತ್ತೆ ಹಚ್ಚುವಲ್ಲಿ, ಯುವತಿಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದರು. ರಾತ್ರಿ 11ರ ವೇಳೆಗೆ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಆಗಮಿಸಿದ ಕುಂದಾಪುರ ಎಸ್ಐ ವಿನಯ ಎಸ್. ಕೊರ್ಲಹಳ್ಳಿ ಹಾಗೂ ಪೊಲೀಸ್ ಸಿಬ್ಬಂದಿ ಮನೆಯ ಬಾಗಿಲು ಒಡೆದು ಅಸ್ವಸ್ಥಗೊಂಡಿದ್ದ ಯುವತಿಯನ್ನು ರಕ್ಷಿಸಿ, ಉಪಚರಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು.


























