ಬೆಂಗಳೂರು : ವೈಟ್ಫೀಲ್ಡ್ ನಲ್ಲಿರುವ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ ಸಂಬಂಧ ಇದೀಗ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಐವರನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ವೈದ್ಯ ಅಹಮದ್, ಹುಬ್ಬಳ್ಳಿಯಲ್ಲಿ ಶೋಯಿಬ್ ಮಿರ್ಜಾ, ಆತನ ಸಹೋದರ ಅಜೀಬ್ ಅಹಮದ್, ಆಂಧ್ರಪ್ರದೇಶದ ಅನಂತಪುರ ರಾಮದುರ್ಗದಲ್ಲಿ ಬೆಂಗಳೂರು ಮೂಲದ ಟೆಕ್ಕಿ ಸೋಹೆಲ್ ಬಂಧಿತರು.
ಪ್ರಕರಣ ಸಂಬಂಧ ಈಗಾಗಲೇ ಬಂಧಿಸಲ್ಪಟ್ಟಿದ್ದ ಉಗ್ರ ಮುಸಾವೀರ್ ಹುಸೇನ್ ಶಾಜೀದ್, ಅಬ್ದುಲ್ ಮಥೀನ್ ತಾಹಾಗೆ ಈ ಐವರು ಹಣಕಾಸಿನ ನೆರವು, ಕೃತ್ಯಕ್ಕೆ ಸಹಾಯ ಮಾಡಿದ ಆರೋಪದಲ್ಲಿ ಬಂಧನ ಮಾಡಲಾಗಿದೆ.
2012ರ ಬೆಂಗಳೂರು, ಹುಬ್ಬಳ್ಳಿ ವಿಧ್ವಂಸಕ ಸಂಚು ಪ್ರಕರಣ ಆರೋಪಿ ಸಬೀಲ್ ಅಹಮದ್, 2012 ಲಷ್ಕರ ಎ ತೋಯಾಬಾ ಸಂಘಟನೆಯೊಂದಿಗೆ ಸೇರಿ ಬೆಂಗಳೂರು, ಹುಬ್ಬಳ್ಳಿ ವಿಧ್ವಂಸಕ ಕೃತ್ಯ ಸಂಚು ನಡೆಸಿದ್ದ ಬಗ್ಗೆ ಮಾಹಿತಿ ದೊರೆತಿದೆ.
ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು 4 ರಾಜ್ಯಗಳ 11 ಕಡೆ ದಾಳಿ ಮಾಡಿದ್ದಾರೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್, ಬನಶಂಕರಿ ಸೇರಿ ಐದಕ್ಕೂ ಹೆಚ್ಚು ಕಡೆ ದಾಳಿ ನಡೆಸಿದೆ.
ಮತೀನ್, ಶಾಝೀಬ್ ನಾಲ್ಕು ವರ್ಷ ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ನೆರವು ನೀಡಿದವರಿಗಾಗಿ ಎನ್ಐಎ ಈ ಕಾರ್ಯಾಚರಣೆ ಮಾಡಿದೆ.
ತಮಿಳುನಾಡಿನ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯೊಂದರ ಮೇಲೆ ರೇಡ್ ಮಾಡಿದ ಎನ್ಐಎ, ಕೆಫೆ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಶಂಕೆ ಮೇರೆಗೆ ಕರ್ನಾಟಕ ಮೂಲದ ಇಬ್ಬರು ವೈದ್ಯರನ್ನು ವಶಕ್ಕೆ ಪಡೆದಿದೆ. ಈ ಇಬ್ಬರು ಪಾತಕಿಗಳಿಗೆ ಹಣಕಾಸು ನೆರವು ನೀಡಿರುವ ಶಂಕೆ ವ್ಯಕ್ತವಾಗಿತ್ತು.


























