ಕೊಪ್ಪಳ : ತಾಲೂಕಿನ ಹೊಸಲಿಂಗಾಪುರ ಗ್ರಾಮದ ಒಂದೇ ಮನೆಯಲ್ಲಿ ಮಗಳು, ತಾಯಿ ಮತ್ತು ಮಗ ಶವವಾಗಿ ಪತ್ತೆಯಾಗಿದ್ದರು. ಶವ ನೋಡಿದವರು ಆತ್ಮಹತ್ಯೆ ಅಂತಲೇ ಹೇಳಿದ್ದರು. ಮೇಲ್ನೋಟಕ್ಕೆ ಮೂವರ ಸಾವು ಕೂಡಾ ಆತ್ಮಹತ್ಯೆ ರೀತಿಯೇ ಇತ್ತು. ಆದ್ರೆ ಪೊಲೀಸರು ತನಿಖೆ ನಡೆಸಿದಾಗ ಬೆಚ್ಚಿಬೀಳುವ ಸತ್ಯ ಬಯಲಾಗಿದೆ.
ಮೂವರದ್ದು ಆತ್ಮಹತ್ಯೆಯಲ್ಲ ಬದಲಾಗಿ ಕೊಲೆ ಮಾಡಿರುವುದು ಖಚಿತವಾಗಿದ್ದು, ತನಿಖೆ ವೇಳೆ ಇಡೀ ಪೊಲೀಸರೇ ಬೆಚ್ಚಿಬೀಳುವಂತಹ ವಿಚಾರ ಪತ್ತೆಯಾಗಿದೆ.
ತನ್ನನ್ನು ಬಿಟ್ಟು ತನ್ನ ಸಹೋದರನನ್ನು ಮದುವೆಯಾಗಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೋರ್ವ ಮೂವರನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದ್ದು, ಇಪ್ಪತ್ನಾಲ್ಕು ಗಂಟೆಯಲ್ಲೇ ಪೊಲೀಸರು ಪ್ರಕರಣವನ್ನು ಭೇದಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿರುವ ಆಶ್ರಯ ಬಡಾವಣೆಯಲ್ಲಿರುವ ಮನೆಯಲ್ಲಿ ಮೂವರು ಶವವಾಗಿ ಪತ್ತೆಯಾಗಿದ್ದರು. ಹೊಸ ಲಿಂಗಾಪುರ ಗ್ರಾಮದ ನಿವಾಸಿಗಳಾದ ಐವತ್ತು ವರ್ಷದ ರಾಜೇಶ್ವರಿ, ರಾಜೇಶ್ವರಿ ಪುತ್ರಿಯಾಗಿರುವ ಇಪ್ಪತ್ತೆಂಟು ವರ್ಷದ ವಸಂತಾ, ಮತ್ತು ವಸಂತಾಳ ಐದು ವರ್ಷದ ಮಗ ಸಾಯಿಧರ್ಮತೇಜ್, ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.
ನಿಗೂಢವಾಗಿ ಮೃತಪಟ್ಟ ಮೂವರ ಶವ ನೋಡಿ ಇಡೀ ಗ್ರಾಮಕ್ಕೆ ಗ್ರಾಮದ ಜನರೇ ಬೆಚ್ಚಿಬಿದಿದ್ದರು. ಮೇ.27 ರಂದು ಮುಂಜಾನೆಯಿಂದ ಸಂಜೆವರೆಗೆ ಕಂಡಿದ್ದ ಮೂವರು ಕೂಡಾ, ಸಂಜೆ ನಂತರ ಹೊರಗೆ ಕಂಡಿರಲಿಲ್ಲಾ. ಆದ್ರೆ ಮೇ.28 ರಂದು ಮುಂಜಾನೆ ಮನೆ ಬಾಗಿಲು ತೆಗೆದು ನೋಡಿದಾಗ, ಅಡುಗೆ ಮನೆಯಲ್ಲಿ ವಸಂತಾಳ ಶವ ಸಿಕ್ಕರೆ, ಮನೆಯ ಬೆಡ್ ರೂಮ್ ನಲ್ಲಿ ರಾಜೇಶ್ವರಿ ಮತ್ತು ರಾಜೇಶ್ವರಿ ಮೊಮ್ಮಗ ಸಾಯಿಧರ್ಮತೇಜ್ ಶವ ಇತ್ತು. ಮೂವರ ಶವದ ಮೇಲೆ ಯಾವುದೇ ಗಾಯದ ಗುರುತುಗಳು ಇರಲಿಲ್ಲ. ಹೀಗಾಗಿ ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತಲೇ ಎಲ್ಲರು ಅಂದುಕೊಂಡಿದ್ದರು. ಈ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಸ್ಥಳಕ್ಕೆ ಕೊಪ್ಪಳ ಎಸ್ಪಿ ಯಶೋಧಾ ವಂಟಗೋಡಿ ಕೂಡಾ ಆಗಮಿಸಿ ಪರಿಶೀಲನೆ ನಡೆಸಿದ್ದರು.
ಮೂವರ ಶವಗಳನ್ನು ನೋಡಿದಾಗ ಆರಂಭದಲ್ಲಿಯೇ ಪೊಲೀಸರು ಕೂಡಾ ಆತ್ಮಹತ್ಯೆಯ ಶಂಕೆ ವ್ಯಕ್ತಪಡಿಸಿದ್ದರು. ಆದ್ರೆ ಆತ್ಮಹತ್ಯೆ ಯಾಕೆ ಮಾಡಿಕೊಂಡರು, ಆತ್ಮಹತ್ಯೆ ಹೇಗೆ ಮಾಡಿಕೊಂಡರು ಎಂದು ಸುದೀರ್ಘವಾಗಿ ತನಿಖೆ ಆರಂಭಿಸಿದಾಗ ಪೊಲೀಸರಿಗೆ ಆತ್ಮಹತ್ಯೆಗೆ ಕಾರಣವಾಗಿದ್ದ ಯಾವುದೇ ಸಂಗತಿ ಕೂಡಾ ಪತ್ತೆಯಾಗಿರಲಿಲ್ಲ. ಹೀಗಾಗಿ ತನಿಖೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ನಡೆಸಿದಾಗ, ಸ್ವತ ಪೊಲೀಸರೇ ಬೆಚ್ಚಿಬಿದ್ದಾರೆ. ಯಾಕಂದ್ರೆ ಮೂವರದ್ದು ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಎನ್ನುವುದು ಗೊತ್ತಾಗಿದೆ.
ಪೊಲೀಸರ ತನಿಖೆಯಲ್ಲಿ ಮೂವರು ಕೂಡಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಮೂವರನ್ನು ಕೂಡಾ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎನ್ನುವುದು ತಿಳಿದುಬಂದಿದೆ. ಹಾಗಾದ್ರೆ ಕೊಲೆ ಮಾಡಿದವರು ಯಾರು ಎಂದು ಪತ್ತೆ ಹಚ್ಚಲು ಮುಂದಾದ ಸಮಯ ಮತ್ತೆ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಯಾಕಂದ್ರೆ ಕೊಲೆ ಮಾಡಿದವರು, ವಸಂತಾ ಎರಡನೇ ಮದುವೆಯಾಗಿದ್ದ ಆರೀಫ್ನ ಸಹೋದರ ಆಸೀಫ್.
ಹೊಸಪೇಟೆ ನಿವಾಸಿಯಾಗಿರುವ 28 ವರ್ಷದ ಆಸೀಫ್ ಮೂವರನ್ನು ಕೊಲೆ ಮಾಡಿದ್ದಾನೆ.
ಕೊಲೆಯಾಗಿರುವ ವಸಂತಾಳಿಗೆ ಮೊದಲು ಆಂಧ್ರ ಪ್ರದೇಶದ ನಂದ್ಯಾಲ ಮೂಲದ ವ್ಯಕ್ತಿ ಜೊತೆ ಮದುವೆಯಾಗಿತ್ತು. ದಂಪತಿಗೆ ಸಾಯಿಧರ್ಮತೇಜ್ ಅನ್ನೋ ಪುತ್ರ ಕೂಡಾ ಇದ್ದ. ಆದ್ರೆ ಕೌಟುಂಬಿಕ ಕಲಹದಿಂದ ವಸಂತಾ, ಮೊದಲ ಪತಿಯನ್ನು ಬಿಟ್ಟು ಬಂದು, ಹೊಸಲಿಂಗಾಪುರ ಗ್ರಾಮದಲ್ಲಿ ತಾಯಿ ಮತ್ತು ಮಗನ ಜೊತೆ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಇನ್ನು ಹೊಸಲಿಂಗಾಪುರ ಗ್ರಾಮದ ಹೊರವಲಯಲ್ಲಿರುವ ಗೊಂಬೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಮಯದಲ್ಲಿ ಅದೇ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆರೀಫ್(ಕೊಲೆ ಆರೋಪಿ) ಎನ್ನುವಾತನ ಪರಿಚಯವಾಗಿದ್ದು, ಅದು ಪ್ರೀತಿಗೆ ತಿರುಗಿತ್ತು. ಬಳಿಕ ಆರೀಫ್ ಮತ್ತು ವಸಂತಾ ಆರು ತಿಂಗಳ ಹಿಂದೆ ಮದುವೆಯಾಗಿದ್ದರಂತೆ. ಮದುವೆ ನಂತರ ಆರೀಫ್ ಆಗಾಗ ವಸಂತಾ ಇದ್ದ ಬಾಡಿಗೆ ಮನೆಗೆ ಬಂದು ಹೋಗುತ್ತಿದ್ದ. ಇನ್ನು ಆರೀಫ್ಗೆ ಕೂಡಾ ಮೊದಲ ಪತ್ನಿಯಿದ್ದು, ದಂಪತಿಗೆ ಮಕ್ಕಳು ಕೂಡಾ ಇದ್ದಾರೆ. ಆದ್ರೆ ಯಾವಾಗ ಆರೀಫ್, ವಸಂತಾಳನ್ನು ಮದುವೆಯಾದನೋ ಆಗ, ಆಸೀಫ್ ಕ್ರೋಧಗೊಂಡಿದ್ದ.
ಯಾಕಂದ್ರೆ ಆರೀಫ್ನ ಮದುವೆಯಾಗೋ ಮೊದಲು ಆಸೀಫ್ ಮತ್ತು ವಸಂತಾ ಪ್ರೀತಿಸುತ್ತಿದ್ದರಂತೆ. ಇಬ್ಬರು ಕೂಡಾ ಮದುವೆಯಾಗಲು ನಿರ್ಧರಿಸಿದ್ದರಂತೆ. ಆದ್ರೆ ಬದಲಾದ ಸಮಯದಲ್ಲಿ ವಸಂತಾ,ಆಸೀಫ್ ನನ್ನು ಬಿಟ್ಟು ಆತನ ಸಹೋದರ ಆರೀಫ್ನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆರೀಫ್ ಮತ್ತು ವಸಂತಾ ಮದುವೆಯಾದ ನಂತರ ಆಸೀಫ್ ಸಿಟ್ಟು ಮತ್ತಷ್ಟು ಹೆಚ್ಚಾಗಿತ್ತು. ಇದೇ ಸಿಟ್ಟಿನಲ್ಲಿ ಆಸೀಫ್, ಮೇ 27 ರಂದು ಸಂಜೆ ವಸಂತಾಳ ಮನೆಗೆ ಬಂದಿದ್ದ. ಮೊದಲು ರಾಜೇಶ್ವರಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ನಂತರ ಸಾಯಿಧರ್ಮತೇಜ್ ನನ್ನು ಕೊಲೆ ಮಾಡಿದ್ದ. ಬಳಿಕ ಕೊನೆಗೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ವಸಂತಾಳನ್ನು ಕೂಡಾ ಕೊಲೆ ಮಾಡಿದ್ದ.
ಸದ್ಯ ಮೂವರ ಸಾವಿನ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮೂವರದ್ದು ಕೂಡಾ ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಅನ್ನೋದನ್ನು ಬಯಲಿಗೆಳೆದಿದ್ದಾರೆ. ಜೊತೆಗೆ ಘಟನೆ ನಡೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಪ್ರಕರಣವನ್ನು ಭೇದಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.


























