ಚೆನ್ನೈ : ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರ ಫೋಟೋವನ್ನಿಟ್ಟು ಅದರ ಮೇಲೆ ಡಿಎಂಕೆ ಕಾರ್ಯಕರ್ತರು ಮೇಕೆಯನ್ನು ಕಡಿದು ವಿಕೃತಿ ಮೆರೆದಿದ್ದಾರೆ. ಸದ್ಯ ಈ ಸಂಬಂಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಕೆ.ಅಣ್ಣಾಮಲೈ ಅವರು ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿಯಿಂದ ಒಂದು ಸ್ಥಾನವನ್ನಾದ್ರು ಗೆಲ್ಲಿಸಬೇಕೆಂದು ಭಾರೀ ಕಷ್ಟ ಪಟ್ಟಿದ್ದರು. ಸ್ವತ ತಾವೇ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆದರೆ ಡಿಎಂಕೆ ಅಭ್ಯರ್ಥಿ ವಿರುದ್ಧ ಸೋತು ಹೋದರು. ಅಲ್ಲದೇ ತಮಿಳುನಾಡಿನಲ್ಲಿ ಬಿಜೆಪಿ ಒಂದು ಸ್ಥಾನವನ್ನು ಕೂಡ ಗೆದ್ದಿಲ್ಲ. ಹೀಗಾಗಿ ಇದನ್ನೇ ವ್ಯಂಗ್ಯ ಮಾಡುತ್ತಿರೋ ಡಿಎಂಕೆ ಪಕ್ಷದ ಕಾರ್ಯಕರ್ತರು ಮೇಕೆ ಕಡಿದಿದ್ದಾರೆ.
ವೀಡಿಯೋದಲ್ಲಿ ಡಿಎಂಕೆ ಕಾರ್ಯಕರ್ತರು ರಸ್ತೆಯೊಂದರ ಮಧ್ಯೆ ಮೇಕೆಗೆ ಹಗ್ಗ ಕಟ್ಟಿ ಎಳೆದು ಹಿಡಿದುಕೊಂಡು ನಿಂತಿದ್ದು ಅದರ ಕೆಳಗೆ ಕೆ.ಅಣ್ಣಾಮಲೈ ಫೋಟೋ ಇಟ್ಟಿದ್ದಾರೆ. ಇನ್ನೊಬ್ಬ ವ್ಯಕ್ತಿ ಕತ್ತಿ ತೆಗೆದುಕೊಂಡು ಮೇಕೆ ತಲೆ ಕಡಿಯುತ್ತಿದ್ದಂತೆ ಅದರ ರಕ್ತವೆಲ್ಲ ಫೋಟೋ ಮೇಲೆ ಬಿದ್ದಿದೆ.
ಈ ವೇಳೆ ಅಣ್ಣಾಮಲೈ ವಿರುದ್ಧ ಘೋಷಣೆ ಕೂಗಿ ಎಲ್ಲರೂ ವಿಕೃತಿ ಮೆರೆದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಿಂಸೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


























