ವಿಟ್ಲ : ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಯುವಕನೋರ್ವನಿಗೆ ಅನ್ಯಕೋಮಿನ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ವಿಟ್ಲ ತಾಲೂಕಿನ ಕನ್ಯಾನ ಸಮೀಪದ ಒಡಿಯೂರು ಐಟಿಐ ಕಾಲೇಜು ಬಳಿ ನಡೆದ ಬಗ್ಗೆ ವರದಿಯಾಗಿದೆ.
ಕನ್ಯಾನ ಸಮೀಪದ ಒಡಿಯೂರು ಐಟಿಐ ಕಾಲೇಜು ಬಳಿ ಪ್ರಕಾಶ್ ಎಂಬವರು ಸ್ಕೂಟಿ ವಾಹನದಲ್ಲಿ ಬರುತ್ತಿರುವ ವೇಳೆ ಕೇರಳ ನೋಂದಣಿಯ ಕಾರಿನಲ್ಲಿ ಬರುತ್ತಿದ್ದ ನಾಲ್ವರು ಅನ್ಯಕೋಮಿನವರು ಗುರಾಯಿಸಿಕೊಂಡು ವಾಹನವನ್ನು ಹಿಂದಕ್ಕೆ ಮುಂದಾಕ್ಕೆ ಓವರ್ ಟೇಕ್ ರೀತಿಯಲ್ಲಿ ಚಲಾಯಿಸಿ ರಸ್ತೆಯಲ್ಲಿಯೇ ಅಡ್ಡ ಇಟ್ಟು ಪ್ರಕಾಶ್ ರವರ ಮೇಲೆ ಹಲ್ಲೆ ನಡೆಸಿದ್ದು, ಜಾತಿ ನಿಂದನೆಗೈದು ಬೆದರಿಕೆ ಹಾಕಿರುತ್ತಾರೆ ಎಂದು ಆರೋಪಿಸಲಾಗಿದೆ.
ಘಟನೆಯಿಂದಾಗಿ ಗಾಯಗೊಂಡ ಪ್ರಕಾಶ್ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಗೆ ಹಿಂದು ಜಾಗರಣ ವೇದಿಕೆ ಪ್ರಮುಖರು ಭೇಟಿ ನೀಡಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಪೊಲೀಸ್ ಇಲಾಖೆಯ ಜೊತೆ ಮಾತುಕತೆ ನಡೆಸಿದರು.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ್ ನರಸಿಂಹ ಮಾಣಿ, ಪ್ರಮುಖರಾದ ಅಜಿತ್ ರೈ ಹೊಸಮನೆ, ಪ್ರಶಾಂತ್ ಕೆಂಪುಗುಡ್ಡೆ, ಅಕ್ಷಯ್ ರಜಪೂತ್ ಮತ್ತಿತರರು ಉಪಸ್ಥಿತರಿದ್ದರು.