ದೆಹಲಿಯಲ್ಲಿ ಸಂಭ್ರಮದ ವಾತಾವರಣ ಇದ್ರೆ, ಅತ್ತ ಕಣಿವೆಯಲ್ಲಿ ನೆತ್ತರೋಕುಳಿ ಹರಿದಿದೆ. ಶಾಂತಿಯುತ ಚುನಾವಣೆ ಬಳಿಕ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಿನ್ನೆ ಸಂಜೆ ಯಾತ್ರಾರ್ಥಿಗಳನ್ನ ಹೊತ್ತೊಯ್ಯುತ್ತಿದ್ದ ಬಸ್ಸಿನ ಮೇಲೆ ದಾಳಿ ನಡೆದಿದೆ.
ಬಸ್ ಮೇಲೆ ಗುಂಡಿನ ದಾಳಿಗೆ 10 ಯಾತ್ರಾರ್ಥಿಗಳ ಸಾವು!
ಕಣಿವೆ ನಾಡಿನಲ್ಲಿ ಅತಿದೊಡ್ಡ ಭಯೋತ್ಪಾದಕ ದಾಳಿ ನಡೆದಿದೆ. ಭಯೋತ್ಪಾದಕರ ಗುಂಡಿನ ದಾಳಿಯ ಪರಿಣಾಮ 10 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 33 ಮಂದಿ ಗಾಯಗೊಂಡಿದ್ದಾರೆ.
53 ಆಸನಗಳ ಬಸ್ನಲ್ಲಿ ಯಾತ್ರಾರ್ಥಿಗಳು ತೆರಳ್ತಿದ್ರು. ಶಿವ ಖೋರಿ ದೇವಸ್ಥಾನದಿಂದ ಕತ್ರಾ ಮಾರ್ಗವಾಗಿ ಬಸ್ ಪ್ರಯಾಣ ಬೆಳೆಸಿತ್ತು. ಪೋನಿ ಪ್ರದೇಶದ ತೇರ್ಯತ್ ಗ್ರಾಮದ ಬಳಿ ಸಂಜೆ 6.15ರ ಹೊತ್ತು. ಈ ವೇಳೆ ಉಗ್ರರು ಬಸ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಚಲಿಸುತ್ತಿದ್ದ ಬಸ್ ಮೇಲೆ ನಡೆದ ದಾಳಿಯಿಂದ ಗಾಬರಿಗೊಂಡ ಚಾಲಕ ನಿಯಂತ್ರಣ ತಪ್ಪಿದ್ದಾನೆ.. ಇದರಿಂದ ರಸ್ತೆಯಿಂದ ಆಳವಾದ ಕಮರಿಗೆ ಬಸ್ ಉರುಳಿದೆ.
ಇನ್ನು, ಘಟನೆ ತಿಳಿದ ಬೆನ್ನಲ್ಲೆ ಅಮಿತ್ ಶಾ, ಘಟನೆಯ ಮಾಹಿತಿ ಪಡೆದಿದ್ದಾರೆ. ಘಟನೆ ಬಗ್ಗೆ ಟ್ವೀಟ್ ಮಾಡಿ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳ ಮೇಲೆ ನಡೆದ ದಾಳಿಯ ಘಟನೆಯಿಂದ ತೀವ್ರ ದುಃಖಿತನಾಗಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮತ್ತು ಡಿಜಿಪಿ ಅವರೊಂದಿಗೆ ಮಾತನಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದೇನೆ. ಈ ಹೇಡಿತನದ ದಾಳಿಯ ಅಪರಾಧಿಗಳನ್ನ ಸುಮ್ಮನೇ ಬಿಡುವುದಿಲ್ಲ. ಘಟನೆಯಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಸ್ಥಳೀಯ ಆಡಳಿತವು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಮೃತರ ಸಂಬಂಧಿಗಳಿಗೆ ಆ ದೇವರು, ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ.
– ಅಮಿತ್ ಶಾ, ಕೇಂದ್ರ ಸಚಿವ
ನೆರೆಯ ರಜೌರಿ ಮತ್ತು ಪೂಂಚ್ಗೆ ಹೋಲಿಸಿದ್ರೆ ರಿಯಾಸಿ ಜಿಲ್ಲೆಯಲ್ಲಿ ಉಗ್ರರ ದಾಳಿ ಕಡಿಮೆ. ಆದ್ರೆ, ಈ ಬಾರಿ ರಿಯಾಸಿ ಜಿಲ್ಲೆಯನ್ನೇ ಉಗ್ರರು ಟಾರ್ಗೆಟ್ ಮಾಡಿದ್ದಾರೆ. ಹೀಗಾಗಿ ಸೇನೆಗೆ ಹೊಸ ಸವಾಲು ಎದುರಾಗಿದ್ದು, ರಿಯಾಸಿ ಜಿಲ್ಲೆಗೆ ಹೆಚ್ಚುವರಿ ಸೇನೆಯನ್ನ ರವಾನಿಸಲಾಗಿದೆ.