ನವದೆಹಲಿ : ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪೋಪ್ ಫ್ರಾನ್ಸಿಸ್ ಅವರ ಭೇಟಿಯನ್ನು ಅಣಕಿಸಿ ಕಾಂಗ್ರೆಸ್ ಪಕ್ಷದ ಕೇರಳ ಘಟಕವು ಸಾಮಾಜಿಕ ಮಾಧ್ಯಮದಲ್ಲಿ ವ್ಯಂಗ್ಯಾತ್ಮಕ ಪೋಸ್ಟ್ ಮಾಡಿತ್ತು. ಅದಕ್ಕೆ ಬಿಜೆಪಿಯಿಂದ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಕಾಂಗ್ರೆಸ್ ಘಟಕ ತನ್ನ ಪೋಸ್ಟ್ ಅನ್ನು ಡಿಲೀಟ್ ಮಾಡಿತ್ತು.
ಕಾಂಗ್ರೆಸ್ ಮಾಡಿದ ಪೋಸ್ಟ್ನಲ್ಲಿ ಪೋಪ್ ಜೊತೆಗಿನ ಪಿಎಂ ಮೋದಿಯ ಫೋಟೋವನ್ನು ಹಾಕಿ “ಅಂತಿಮವಾಗಿ ಪೋಪ್ಗೆ ದೇವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು!” ಎಂಬ ಕಾಮೆಂಟ್ ಹಾಕಲಾಗಿತ್ತು. ಈ ಹಿಂದೆ ಪ್ರಧಾನಿ ಮೋದಿ ಟ್ವೀಟ್ ಒಂದರಲ್ಲಿ ಯಾವುದೋ ಒಂದು ಕಾರ್ಯಕ್ಕಾಗಿ ದೇವರೇ ನನ್ನನ್ನು ಕಳುಹಿಸಿದ್ದಾನೆ ಎಂದು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಲೇವಡಿ ಮಾಡಿ ಪೋಸ್ಟ್ ಮಾಡಿತ್ತು.
ಈ ಪೋಸ್ಟ್ ಅನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಮತ್ತು ಪೋಪ್ ಇಬ್ಬರನ್ನೂ ಅವಮಾನಿಸಿದೆ ಎಂದು ಆರೋಪಿಸಿತ್ತು.
ಇದಕ್ಕೆ ಕೇರಳದ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಟ್ವೀಟ್ ಮಾಡಿ, “ಇಸ್ಲಾಮಿಸ್ಟ್ ಅಥವಾ ಅರ್ಬನ್ ನಕ್ಸಲರು ನಡೆಸುತ್ತಿರುವ ಕಾಂಗ್ರೆಸ್ ಕೇರಳ ಘಟಕದ ಎಕ್ಸ್ ಹ್ಯಾಂಡಲ್ ರಾಷ್ಟ್ರೀಯವಾದಿ ನಾಯಕರ ವಿರುದ್ಧ ಅವಹೇಳನಕಾರಿ ಮತ್ತು ಅವಮಾನಕರ ವಿಷಯವನ್ನು ಪೋಸ್ಟ್ ಮಾಡುವುದನ್ನು ಮುಂದುವರೆಸಿದೆ. ಈಗ, ಇದು ಗೌರವಾನ್ವಿತ ಪೋಪ್ ಮತ್ತು ಕ್ರಿಶ್ಚಿಯನ್ ಸಮುದಾಯದವರನ್ನು ಅಪಹಾಸ್ಯ ಮಾಡುವ ಮಟ್ಟಕ್ಕೆ ಇಳಿದಿದೆ.” ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಯನಾಡು ಸಂಸದ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರಂತಹ ಕಾಂಗ್ರೆಸ್ ಪ್ರಮುಖರು ಈ ರೀತಿಯ ವ್ಯಂಗ್ಯವನ್ನು ಸಮರ್ಥಿಸಿಕೊಳ್ಳುತ್ತಾರೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕೇರಳದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಾರ್ಜ್ ಕುರಿಯನ್ ಅವರು ಈ ಪೋಸ್ಟ್ ಧಾರ್ಮಿಕ ಭಾವನೆಗಳಿಗೆ ಆಕ್ಷೇಪಾರ್ಹ ಮತ್ತು ನೋವುಂಟು ಮಾಡುತ್ತದೆ. ವಿಶೇಷವಾಗಿ ಕೇರಳದಲ್ಲಿ ಕ್ರಿಶ್ಚಿಯನ್ ಧರ್ಮವು ಮೂರನೇ ಅತಿದೊಡ್ಡ ಆಚರಣೆಯ ಧರ್ಮವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ಅವರು ಇತರ ಧರ್ಮಗಳನ್ನು ಅವಹೇಳನ ಮಾಡುವ ಇತಿಹಾಸವನ್ನು ಕಾಂಗ್ರೆಸ್ ಹೊಂದಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕ್ಯಾಥೋಲಿಕ್ ಧರ್ಮದವರ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ದೇವರ ಬಗ್ಗೆ ತಮಾಷೆ ಮಾಡುವುದು ಧರ್ಮದ್ರೋಹಿ ಅಲ್ಲ ಎಂಬ ಪೋಪ್ ಫ್ರಾನ್ಸಿಸ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಉಲ್ಲೇಖಿಸಿದೆ. ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ವಿ.ಟಿ ಬಲರಾಮ್ ಅವರು ಕೂಡ ಈ ಪೋಸ್ಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ. ಇದು ವಿಡಂಬನಾತ್ಮಕವಾಗಿದೆ. “ತಾನು ಸಾಮಾನ್ಯ ಮನುಷ್ಯನಲ್ಲ, ತಾನು ದೇವರೇ ಕಳುಹಿಸಿರುವ ಎಂದು ಸ್ವತಃ ಮೋದಿಯೇ ಹೇಳಿಕೊಂಡಿದ್ದಾರೆ. ಈ ಟ್ವೀಟ್ ವಿಡಂಬನಾತ್ಮಕವಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡರೆ ಯಾರಿಗೂ ಅವಮಾನ ಆಗುವುದಿಲ್ಲ.” ಎಂದಿದ್ದಾರೆ.
ತಾವು ಮಾಡಿದ ಟ್ವೀಟ್ಗೆ ತೀವ್ರ ಟೀಕೆ ವ್ಯಕ್ತವಾಗಿದ್ದರಿಂದ ಕಾಂಗ್ರೆಸ್ನ ಕೇರಳ ಘಟಕವು ತನ್ನ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ. “ಕ್ರೈಸ್ತರಿಗೆ ಯಾವುದೇ ಭಾವನಾತ್ಮಕ ಅಥವಾ ಮಾನಸಿಕ ತೊಂದರೆಯನ್ನು” ಉಂಟುಮಾಡಿದ್ದರೆ ಕ್ಷಮೆ ಯಾಚಿಸುವುದಾಗಿಯೂ ತಿಳಿಸಿದೆ. ನಮಗೆ ಯಾವುದೇ ಧರ್ಮ ಅಥವಾ ಧಾರ್ಮಿಕ ವ್ಯಕ್ತಿಗಳನ್ನು ಅವಮಾನಿಸುವ ಉದ್ದೇಶವಿಲ್ಲ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಪ್ರಪಂಚದಾದ್ಯಂತ ಕ್ರೈಸ್ತರು ದೇವರಂತೆ ಕಾಣುವ ಪೋಪ್ ಅವರನ್ನು ಅವಮಾನಿಸುವ ಆಲೋಚನೆಯನ್ನು ಯಾವುದೇ ಕಾಂಗ್ರೆಸ್ ಕಾರ್ಯಕರ್ತರು ಮಾಡುವುದಿಲ್ಲ. ಆದರೆ, ನರೇಂದ್ರ ಮೋದಿ ಅವರನ್ನು ಅಣಕಿಸಲು ಕಾಂಗ್ರೆಸ್ಗೆ ಯಾವುದೇ ಮುಜುಗರವಿಲ್ಲ ಎಂದು ಕೇರಳ ಕಾಂಗ್ರೆಸ್ ಹೇಳಿದೆ.




























