ಔರಂಗಬಾದ್ : ರೀಲ್ಸ್ಗಾಗಿ ಯುವತಿಯೊಬ್ಬಳು ಕಾರು ಚಲಾವಣೆ ಮಾಡಲು ಹೋಗಿ ಆಕ್ಸಿಲರೇಟರ್ ಒತ್ತಿದ ಪರಿಣಾಮ ಕಾರು ರಿವರ್ಸ್ ಹೋಗಿ ಪ್ರಪಾತಕ್ಕೆ ಬಿದ್ದು ಯುವತಿ ಸಾವನ್ನಪ್ಪಿದ ಘಟನೆ ಔರಂಗಬಾದ್ನಲ್ಲಿ ನಡೆದಿದೆ.
ಮಾಹಿತಿ ಪ್ರಕಾರ, ಶ್ವೇತಾ ಸುರ್ವಾಸೆ ಮತ್ತು ಆಕೆಯ ಸ್ನೇಹಿತ ಹನುಮಾನ್ ನಗರದ ನಿವಾಸಿ ಸೂರಜ್ ಸಂಜಯ್ ಮುಳೆ (25) ಔರಂಗಾಬಾದ್ನಿಂದ ಟೊಯೊಟಾ ಎಟಿಯೋಸ್ ಕಾರಿನಲ್ಲಿ ಖುಲ್ತಾಬಾದ್ ತಾಲೂಕಿನ ಸುಲಿಭಂಜನ್ನಲ್ಲಿರುವ ದತ್ತ ಮಂದಿರ ಪ್ರದೇಶಕ್ಕೆ ಬಂದಿದ್ದರು. ಶ್ವೇತಾ ಮೊಬೈಲ್ ರೀಲ್ಸ್ಗಾಗಿ ಕಾರು ಓಡಿಸುತ್ತೇನೆ ಎಂದು ಸ್ನೇಹಿತನಿಗೆ ಹೇಳಿದಳು.
ಇದಕ್ಕೆ ಒಪ್ಪಿದ ಸ್ನೇಹಿತ ವೀಡಿಯೋ ಚಿತ್ರೀಕರಿಸುತ್ತಿದ್ದ. ಇತ್ತ ಶ್ವೇತಾ ಡ್ರೈವಿಂಗ್ ಮಾಡಲು ಹೋಗಿ ಕಾರು ರಿವರ್ಸ್ ಗೇರ್ನಲ್ಲಿದ್ದಾಗ ಆಕಸ್ಮಿಕವಾಗಿ ಆಕ್ಸಿಲರೇಟರ್ ಒತ್ತಿದ್ದಾಳೆ. ಈ ಪರಿಣಾಮ ಕಾರು ಹಿಂದಕ್ಕೆ ಹೋಗಿ ಪ್ರಪಾತಕ್ಕೆ ಬಿದ್ದಿದೆ. ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ ಆಕೆಯನ್ನು ತಲುಪಲು ಒಂದು ಗಂಟೆ ತೆಗೆದುಕೊಂಡರು. ಅಲ್ಲಿಂದ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದರು.
ಸೂಲಿಭಂಜನದಲ್ಲಿರುವ ದತ್ತ ಮಂದಿರ ಪ್ರದೇಶವು ತನ್ನ ವಿಹಂಗಮ ನೋಟಗಳಿಗೆ ಹೆಸರುವಾಸಿಯಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಘಟನೆಯಲ್ಲಿ ಕಾರು ಹಿಂದಕ್ಕೆ ಚಲಿಸಿ ಪ್ರಪಾತಕ್ಕೆ ಬಿದ್ದ ವೀಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.