ಮಧ್ಯಪ್ರದೇಶ : ವರದಕ್ಷಿಣೆಗಾಗಿ ತಾಳಿ ಕಟ್ಟಿದ ಗಂಡನೇ ತನ್ನ ಹೆಂಡತಿಯ ಕೈ-ಕಾಲುಗಳನ್ನು ಕತ್ತರಿಸಿ ಕೊಲೆ ಮಾಡಿದ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಸೊಸೆಯನ್ನು ಕೊಲೆ ಮಾಡಲು ಮಗನ ಜೊತೆಗೆ ಅತ್ತೆ-ಮಾವ ಕೂಡ ಸೇರಿರುವುದು ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ತಂದಿ ಖುರ್ದ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಲಕ್ಷ್ಮಣಪುರ ಗ್ರಾಮದ ನಿವಾಸಿ ರಾಮಪ್ರಸಾದ್ ತನ್ವಾರ್ ಎಂಬವರು 23 ವರ್ಷದ ರೀನಾ ಎಂಬಾಕೆಯನ್ನು ತಂದಿ ಖುರ್ದ್ ಗ್ರಾಮದ ಮಿಥುನ್ ತನ್ವಾರ್ ಎಂಬಾತನಿಗೆ ಮದ್ವೆ ಮಾಡಿಕೊಟ್ಟಿದ್ದರು. ಐದು ವರ್ಷದ ಹಿಂದೆ ಇವರಿಬ್ಬರ ವಿವಾಹ ನಡೆದಿತ್ತು. ಬಳಿಕ ರೀನಾಗೆ ಒಂದು ವರ್ಷದ ಮಗಳು ಮತ್ತು ಸದ್ಯ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಆದರೆ ವರದಕ್ಷಿಣೆ ಆಸೆಗೆ ಬಿದ್ದ ಗಂಡ ತನ್ನ ತಾಯಿ ಜೊತೆಗೆ ಸೇರಿಕೊಂಡು ಹೆಂಡತಿಯನ್ನು ಬರ್ಬರವಾಗಿ ಕೊಂದಿದ್ದಾನೆ.
ಕೊಲೆ ಮಾಡಿದ ಬಳಿಕ ಆಕೆಯ ಮೃತದೇಹವನ್ನು ಮನೆಯ ಬಳಿಯೇ ಸುಟ್ಟು ಹಾಕಿದ್ದಾನೆ. ಈ ವಿಚಾರ ತಿಳಿದಂತೆ ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ರೀನಾ ಪೋಷಕರು ಚಿತೆಯ ಬೆಂಕಿ ನಂದಿಸಿ ಅರ್ಧ ಸುಟ್ಟ ಮೃತದೇಹವನ್ನು ಹೊರತೆಗೆದಿದ್ದಾರೆ. ಅಲ್ಲಿನ ಗ್ರಾಮಸ್ಥರ ನೆರವಿನಿಂದ ಹೊಳೆಯ ನೀರನ್ನು ತಂದು ಬೆಂಕಿ ನಂದಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಂತೆ ರೀನಾ ಗಂಡ ಮತ್ತು ಅತ್ತೆ ರಾಜುಬಾಯಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ರೀನಾಳ ಗಂಡ ಮತ್ತು ಮಾವ ಇತ್ತೀಚೆಗೆ 7 ಲಕ್ಷ ರೂಪಾಯಿಗೆ ಭೂಮಿಯೊಂದನ್ನು ಖರೀದಿಸಿದ್ದರು. ಅದರ ಸಾಲ ತೀರಿಸಲು ಚಿನ್ನಾಭರಣ ಮತ್ತು 1.5 ಲಕ್ಷ ರೂಪಾಯಿ ನೀಡಿದ್ದರು.
ಉಳಿದ ಸಾಲ ತೀರಿಸಲು ರೀನಾಳಿಗೆ ತನ್ನ ಗಂಡ ಮತ್ತು ಅತ್ತೆ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆ ಬೇಕೆಂದು ಪೀಡಿಸುತ್ತಿದ್ದರು. ತವರು ಮನೆಯಿಂದ ಹಣ ತಂದು ಕೊಡದೇ ಹೋದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದರು. ಕೊನೆಗೆ ರೀನಾಳ ಉಳಿದ ಚಿನ್ನವನ್ನು ಸಾಲ ತೀರಿಸಲು ಗಂಡನ ಮನೆಯವರು ಮುಂದಾಗಿದ್ದಾರೆ. ಆದರೆ ಇದಕ್ಕೆ ಒಪ್ಪದ ರೀನಾ ಮತ್ತು ಗಂಡನ ನಡುವೆ ಜಗಳವಾಗಿದೆ. ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.