ಉಡುಪಿ : ಮಂದಾರ್ತಿ, ಮಡಾಮಕ್ಕಿ, ಅಮೃತೇಶ್ವರಿ, ಸಾಲಿಗ್ರಾಮ ಹಾಗೂ ಮಾರಣಕಟ್ಟೆ ಮೇಳಗಳಲ್ಲಿ ಸುಮಾರು 12 ವರ್ಷ ಸ್ತ್ರೀವೇಷಧಾರಿಯಾಗಿ ಕಲಾಸೇವೆಗೈದ ಗುರುಪ್ರಸಾದ್ ನೀರ್ಜೆಡ್ಡು (26) ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಗುರುಪ್ರಸಾದ್ ನೀರ್ಜೆಡ್ಡು ಅವರು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ಕಾರಣ ಮಾತ್ರ ನಿಗೂಢವಾಗಿಯೇ ಇದೆ. ನಿಕಟವರ್ತಿಗಳು ಮಾತ್ರ ದುಡುಕಿನ ನಿರ್ಧಾರ ಎಂದು ಕಂಬನಿ ಮಿಡಿದಿದ್ದಾರೆ.
ಮಂದಾರ್ತಿ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಹಾರಾಡಿ ರಮೇಶ ಗಾಣಿಗರಿಂದ ಗುರುಪ್ರಸಾದ್ ಯಕ್ಷಗಾನ ನೃತ್ಯಾಭ್ಯಾಸ ಮಾಡಿದರು. ಭವಿಷ್ಯದಲ್ಲಿ ಭರವಸೆಯ ಕಲಾವಿದರಾಗಿದ್ದ ಇವರು ಮುಂದಿನ ತಿರುಗಾಟಕ್ಕೆ ಕುಂದಾಪುರ ತಾಲೂಕಿನ ಹಾಲಾಡಿ ಮೇಳಕ್ಕೆ ನೇಮಕಗೊಂಡಿದ್ದರು.
12 ವರ್ಷ ಸ್ತ್ರೀವೇಷಧಾರಿಯಾಗಿ ಕಲಾಸೇವೆಗೈದ ಗುರುಪ್ರಸಾದ್ ಅವರು ತಾಯಿ, ತಮ್ಮ ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.