ಪುತ್ತೂರು : ಸರಕಾರದ ವಿವಿಧ ಇಲಾಖೆಯಿಂದ ಸಾರ್ವಜನಿಕರಿಗೆ ಯಾವುದೆಲ್ಲಾ ಸೌಲಭ್ಯಗಳು ದೊರೆಯುತ್ತದೆಯೋ ಅವುಗಳ ಮಾಹಿತಿಯನ್ನು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ತಾಣದಲ್ಲಿ ಪ್ರಕಟಿಸಿ ಪ್ರಚಾರ ಮಾಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಅವರು ದ.ಕ ಜಿಲ್ಲಾ ಪಂಚಾಯತ್, ಗ್ರಾಮೀಣ ಕೈಗಾರಿಕಾ ಇಲಾಖೆಯ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಕುಶಲ ಕರ್ಮಿಗಳಿಗೆ ಸಲಕರಣೆಯನ್ನು ವಿತರಿಸಿ ಮಾತನಾಡಿದರು.
ಯಾವ ಇಲಾಖೆಯಲ್ಲಿ ಯಾವ ಸೌಲಭ್ಯಗಳು ದೊರೆಯುತ್ತದೆ ಎಂದು ಸಾರ್ವಜನಿಕರಿಗೆ ಮಾಹಿತಿ ಕೊರತೆಯಿದೆ. ಕೆಲವರಿಗೆ ಆನ್ ಲೈನ್ ನಲ್ಲಿ ಅರ್ಜಿ ಹಾಕಬೇಕೆಂದು ಗೊತ್ತೇ ಇರುವುದಿಲ್ಲ ಮತ್ತು ಯಾವಾಗ ಅರ್ಜಿ ಹಾಕಬೇಕು ಎಂಬ ಮಾಹಿತಿಯೂ ಇರುವುದಿಲ್ಲ ಈ ಕಾರಣಕ್ಕೆ ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಸರಕಾರದಿಂದ ಸಿಗುವ ಸೌಲಭ್ಯಗಳು ಕೆಲವರಿಗೇ ಮಾತ್ರ ಮೀಸಲು ಎಂಬಂತಾಗಬಾರದು ಎಂದು ಹೇಳಿದ ಶಾಸಕರು ಪ್ರತೀ ಇಲಾಖೆಯು ತಮ್ಮ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ತಾಣದಲ್ಲಿ ಪ್ರಕಟಿಸುವ ಮೂಲಕ ಪ್ರಚಾರ ನೀಡಬೇಕು ಎಂದು ಹೇಳಿದರು.
ವಿಚಾರ ಗೊತ್ತಿಲ್ಲದೆ ಅನೇಕ ಮಂದಿ ಬಡವರು ನನ್ನ ಕಚೇರಿಗೆ ಬಂದು ಸೌಲಭ್ಯಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಯಾವುದೇ ದೂರುಗಳು ಬರುವಂತಾಗಬಾರದು ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ಪ್ರತೀಯೊಬ್ಬರಿಗೂ ನೆರವು ನೀಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರ ಎಲ್ಲಾ ಹಂತದಲ್ಲಿಯೂ ಜನರಿಗೆ ನೆರವು ನೀಡುವ ಕೆಲಸವನ್ನು ಮಾಡುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬಕ್ಕೆ ನೆರವಾಗಿದೆ ಇದರ ಜೊತೆ ವಿವಿಧ ಇಲಾಖೆಯ ಮೂಲಕ ಬಡವರಿಗೆ ನೆರವಾಗುವ ಕೆಲಸವನ್ನು ಸರಕಾರ ಮಾಡುತ್ತಿದೆ.
ಸುಮಾರು 91 ವಿವಿಧ ಕುಶಲ ಕಾರ್ಮಿಕರಿಗೆ ಟೈಲರಿಂಗ್ ಯಂತ್ರ, ಕಾರ್ಪೆಂಟರ್ ಕಿಟ್, ಎಲೆಕ್ಟ್ರಿಕಲ್ ಕಿಟ್ ಸೇರಿದಂತೆ ಹಲವು ವಿಧದ ಕಿಟ್ಗಳನ್ನು ವಿತರಿಸುತ್ತಿದೆ. ಜನರು ಇದನ್ನು ಸದ್ಬಳಕೆ ಮಾಡುವಂತಾಗಬೇಕು ಎಂದು ಹೇಳಿದರು.

























