ಪುತ್ತೂರು : ಓರ್ವ ರಾಯಭಾರಿಯಾಗಿ, ಅಧ್ಯಾಪಕನಾಗಿ, ರಾಜನೀತಿ ನಿಪುಣನಾಗಿ, ಎಲ್ಲರಿಗೂ ಅಚ್ಚುಮೆಚ್ಚಿನವರಾಗಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರು ಗುರುತಿಸಿಕೊಂಡಿದ್ದರು. ವಿದ್ಯಾರ್ಥಿಗಳ ಹೃದಯವನ್ನು ತಟ್ಟುವಲ್ಲಿ ಅವರು ನಿಸ್ಸೀಮರಾಗಿದ್ದರು ಮಾತ್ರವಲ್ಲ ಜಗತ್ತು ಕಂಡ ಅತೀ ಶ್ರೇಷ್ಟ ತತ್ವಶಾಸ್ತ್ರಜ್ಞರವರಲ್ಲಿ ಡಾ.ರಾಧಾಕೃಷ್ಣನ್ ರವರೂ ಕೂಡ ಓರ್ವರಾಗಿದ್ದರು ಎಂದು ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ.ತುಕಾರಾಂ ಪೂಜಾರಿರವರು ಹೇಳಿದರು.

ಸೆ.5 ರಂದು ಸಂಪ್ಯದಲ್ಲಿ ಅಕ್ಷಯ ಎಜ್ಯಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸಾಧಕ ಶಿಕ್ಷಕರಿಗೆ ಗುರು ಪುರಸ್ಕಾರ ಮತ್ತು ಗೌರವ ಸಮ್ಮಾನ ಸಮಾರಂಭದಲ್ಲಿ ಅವರು ಸಮಾರಂಭದ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಪ್ರಬುದ್ಧತೆಯಾಗಿ ಬೆಳೆಸಿದಾಗ ವಿದ್ಯಾರ್ಥಿಗಳು ಜೀವನದಲ್ಲಿ ಯಶ ಕಂಡುಕೊಳ್ಳುತ್ತಾರೆ. ವಿದ್ಯಾರ್ಥಿಗಳಲ್ಲಿ ಸಾಧಿಸುವ ಗುರಿ ಇರಬೇಕಾದರೆ ಆವರ ಹಿಂದೆ ಸಾಧಕ ಗುರುವಿರಬೇಕು. ಶಿಕ್ಷಕರ ದಿನಾಚರಣೆಯ ಸಂದರ್ಭ `ಹ್ಯಾಪಿ ಟೀಚರ್ಸ್ ಡೇ’ ಹೇಳಿಕೊಳ್ಳುವುದರ ಹಿಂದೆ ಯಾವ ಅರ್ಥ ಅಡಗಿದೆ ಎಂಬುದನ್ನು ನಾವು ಅರಿಯುವವರಾಗಬೇಕು ಎಂದ ಅವರು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಶ್ರೇಷ್ಟ ಸಂಸ್ಕಾರವನ್ನು ಕಲಿಸುವ, ಚರಿತ್ರೆ ಹಾಗೂ ಪರಂಪರೆಯನ್ನು ತಿಳಿಸುವ ಕೇಂದ್ರಗಳಾಗಬೇಕೇ ವಿನಹ ಹಣ ಗಳಿಕೆಯ ಕೇಂದ್ರಗಳಾಗಬಾರದು. ಈ ನಿಟ್ಟಿನಲ್ಲಿ ಅಕ್ಷಯ ಕಾಲೇಜು ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿಯನ್ನು ನೀಡುತ್ತಾ ಸಮಾಜದ ಶ್ರೇಯಸ್ಸಿಗೋಸ್ಕರ ಶ್ರಮಿಸುತ್ತಿರುವುದು ಹೆಗ್ಗಳಿಕೆಯೇ ಸರಿ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಚೇರ್ಮ್ಯಾನ್ ಜಯಂತ್ ನಡುಬೈಲು ಮಾತನಾಡಿ, ಅಕ್ಷಯ ಕಾಲೇಜು ಆರಂಭವಾದಾಗಿನಿಂದ ಇವತ್ತಿನರೆಗೆ ಈ ಕ್ಯಾಂಪಸ್ಸಿನಲ್ಲಿ ಗುರುವಂದನೆ ಕಾರ್ಯಕ್ರಮ ಮಾಡುವ ಮೂಲಕ ಗುರುಗಳನ್ನು ಗೌರವಿಸುತ್ತಿದ್ದೇವೆ. ಈ ಬಾರಿ ಇನ್ನೂ ವಿಶೇಷತೆ ಎಂದರೆ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಜನೆಗೈಯುವ ವಿದ್ಯಾರ್ಥಿಗಳ ಹೆತ್ತವರು ಯಾರು ಶಿಕ್ಷಕರಾಗಿದ್ದಾರೋ ಅವರನ್ನು ಗುರುತಿಸುವ ಕಾರ್ಯಕ್ರಮ ಮಾಡುವ ಮೂಲಕ ಶಿಕ್ಷಕರ ದಿನಾಚರಣೆಗೆ ವಿಶೇಷ ಅರ್ಥವನ್ನು ಕಲ್ಪಿಸುತ್ತಿದ್ದೇವೆ ಮಾತ್ರವಲ್ಲ ಮುಂದಿನ ವರ್ಷಗಳಲ್ಲೂ ಇದು ಮುಂದುವರೆಯಲಿದೆ ಎಂದ ಅವರು ಪ್ರಸ್ತುತ ದಿನಗಳಲ್ಲಿ ಗುರುಗಳನ್ನು ಗೌರವಿಸುವ ಪರಿಪಾಠ ಕೊಂಚ ಕಡಿಮೆಯಾಗಿರುವುದು ವಿರ್ಯಾಸ. ನಮಗೆ ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡುವ ಶಿಕ್ಷಕರನ್ನು ನಾವು ಗೌರವಿಸೋಣ ಆವಾಗ ಸಮಾಜ ಕೂಡ ನಮ್ಮನ್ನು ಗೌರವಿಸುತ್ತದೆ ಎಂದು ಅವರು ಹೇಳಿದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವನ್ ಮಾತನಾಡಿ, ಅಕ್ಷಯ ಕಾಲೇಜು ನಮ್ಮನ್ನು ಎಲ್ಲಾ ರೀತಿಯಿಂದ ಪ್ರೋತ್ಸಾಹಿಸುತ್ತಿದ್ದಾರೆ. ಪುತ್ತೂರಿನ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಬಹಳ ಪ್ರತಿಭಾವಂತರು ಎನ್ನುವ ಮಾತಿದೆ ಯಾಕೆಂದರೆ ಈ ಸಂಸ್ಥೆಯ ಉಪನ್ಯಾಸಕರೇ ಪ್ರತಿಭಾವಂತರಾಗಿರುವಾಗ ವಿದ್ಯಾರ್ಥಿಗಳು ಕೂಡ ಪ್ರತಿಭಾವಂತರಾಗುವಲ್ಲಿ ಪ್ರಮುಖ ಕಾರಣವಾಗುತ್ತದೆ. ಸೋಲು-ಗೆಲುವಿನಲ್ಲಿ ಮಾತ್ರವಲ್ಲ ಎಲ್ಲಾ ವಿಷಯದಲ್ಲಿ ಕಾಲೇಜಿನ ಶಿಕ್ಷಕರ ಪ್ರೋತ್ಸಾಹ ಸದಾ ಇದ್ದೇ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ಗೆಳೆಯರಂತೆ ಬೆರೆತು ಜೀವನದಲ್ಲಿ ಶಿಸ್ತನ್ನು ಮೂಡಿಸುತ್ತಿರುವ ಶಿಕ್ಷಕರಿಗೆ ನಮನಗಳು ಎಂದರು.

ಕಾಲೇಜಿನಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಉಪನ್ಯಾಸಕರಾದ ಕಿಶೋರ್ ಕುಮಾರ್ ರೈ, ಭವ್ಯಶ್ರೀ, ರಕ್ಷಣ್, ರಶ್ಮಿ, ಮೇಘಶ್ರೀ, ಅನುಷಾ, ಶ್ರದ್ಧಾ, ಪ್ರದೀಪ್ ಪಿ.ಶೆಟ್ಟಿ, ರಾಕೇಶ್ ಕುಮಾರ್, ಕಾವ್ಯಾ, ದೀಕ್ಷಾ ರೈ, ಸೌಜನ್ಯ, ಜನಿತಾ, ಗೌರಿಶಂಕರ್, ಹರೀಶ್ಚಂದ್ರ, ವೀಣಾ, ಅಶೋಕ್ ಕುಮಾರ್, ದಯಾನಂದ, ಗಂಧವೃತ್, ಧನ್ಯಶ್ರೀ, ಅನನ್ಯ ಭಟ್, ಶ್ರದ್ಧಾ (ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್), ನಿಧಿಶ್ರೀ ಎಂ.ಪಿ, ಪ್ರತಿಭಾ, ರತ್ನಾಕರ್, ದೀಪ್ತಿ, ಸಾಯಿಕೃಪ, ನವೀನ್, ಜಯಶ್ರೀ, ಪ್ರಭಾವತಿ, ಬೋಧಕೇತರ ಸಿಬ್ಬಂದಿಯಾಗಿರುವ ಐಶ್ವರ್ಯ, ನಿವೇದಿತಾ, ಸಂತೋಷ್ ಕುಮಾರ್, ಅಶ್ವಥ್, ಸುಜಾತಾ, ಯಶೋಧ, ದಯಾಮಣಿ ಹಾಗೂ ಎಬ್ರೋಡ್ ಸ್ಟಡೀಸ್ನ ಭರತ್ ಕುಮಾರ್ರವರುಗಳಿಗೆ ಕಾಲೇಜಿನ ಚೇರ್ಮ್ಯಾನ್ ಜಯಂತ್ ನಡುಬೈಲು ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್ರವರು ಶಾಲು ಹೊದಿಸಿ ಗೌರವಾರ್ಪಣೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅತಿಥಿ ಗಣ್ಯರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರಿಗೆ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು.
ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪೂಜಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾವ್ಯಾ ಗಣೇಶ್ ಪ್ರಾರ್ಥಿಸಿದರು. ಕಾಲೇಜು ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ ಸ್ವಾಗತಿಸಿ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ ವಂದಿಸಿದರು. ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಸುನಿಲ್ ಕುಮಾರ್, ಸುಂದರ್ ಗೌಡರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.

ಸನ್ಮಾನಿತ ಶಿಕ್ಷಕರ ಪಟ್ಟಿಯನ್ನು ಉಪನ್ಯಾಸಕಿ ಭವ್ಯಶ್ರೀ ವಾಚಿಸಿದರು. ಉಪನ್ಯಾಸಕ ಹರೀಶ್ಚಂದ್ರ ಉದ್ಘಾಟಕರ ಪರಿಚಯ ಮಾಡಿದರು. ವಿದ್ಯಾರ್ಥಿನಿ ವಿಂಧುಶ್ರೀ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ, ಉಪನ್ಯಾಸಕ-ಬೋಧಕೇತರ ಸಿಬ್ಬಂದಿಗಳಿಂದ ವಿವಿಧ ಮನರಂಜನೆ ಕಾರ್ಯಕ್ರಮ ಜರುಗಿತು.
ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಾಗಿದ್ದು, ಈ ವಿದ್ಯಾರ್ಥಿಗಳ ಹೆತ್ತವರು ವಿವಿಧ ಕಡೆಯ ಶಾಲೆಗಳಲ್ಲಿ ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತಿರುವ ಶಿಕ್ಷಕರಾದ ಕುಸುಮ, ಶೀಲಾವತಿ ಕೆ.ಕೆ, ಮೀನಾಕ್ಷಿ ಕೆ.ಎಸ್, ಸ್ವಾತಿ ಎನ್.ಎನ್, ಶೋಭಾವತಿ, ನಿವೃತ್ತ ಶಿಕ್ಷಕಿ ಪಾರ್ವತಿ ಡಿ, ತನುಜ ಎಂ.ಡಿ, ವಾಣಿ ಎ, ಚೈತ್ರ ಪಿ, ಗುಲಾಬಿ ಕೆ, ಯಶೋಧ ಎ, ಅನಂತೇಶ್ವರಿ, ನಿವೃತ್ತ ಶಿಕ್ಷಕ ಭಾಸ್ಕರ್ ಎನ್, ನಿವೃತ್ತ ಶಿಕ್ಷಕ ಬಾಲಕೃಷ್ಣ ಬಿ.ಸಿರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನ ಸಂದರ್ಭದಲ್ಲಿ ಸನ್ಮಾನಿತ ಶಿಕ್ಷಕರ ಮುಂಭಾಗದಲ್ಲಿ ಅವರ ಮಕ್ಕಳು ಮೊಣಕಾಲೂರಿ ಕುಳಿತುಕೊಂಡಿರುವುದು ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿತ್ತು. ಸನ್ಮಾನಿತರ ಪೈಕಿ ಮೀನಾಕ್ಷಿ ಕೆ.ಎಸ್ ಹಾಗೂ ತನುಜ ಎಂ.ಡಿರವರು ಅನಿಸಿಕೆ ವ್ಯಕ್ತಪಡಿಸಿ ಅಕ್ಷಯ ಕಾಲೇಜು ಅಕ್ಷಯ ಪಾತ್ರೆಯಂತೆ ಸದಾ ಬೆಳಗಲಿ ಎಂದರು.
ಸಮಾಜದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಚಿರಪರಿಚಿತರಾದ ಮಾತ್ರವಲ್ಲ ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ.ತುಕಾರಾಂ ಪೂಜಾರಿ ರವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ `ಅಕ್ಷಯ ಗುರು’ ಸಮ್ಮಾನ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಡಾ.ತುಕಾರಾಂ ಪೂಜಾರಿ ರವರ ಪತ್ನಿ ಉಪಸ್ಥಿತರಿದ್ದರು.

























