ಬೆಂಗಳೂರು : ಅಪಘಾತಕ್ಕೆ ಒಳಗಾಗುವ ಜನರ ರಕ್ಷಣೆಗೆ ಮುಖ್ಯಮಂತ್ರಿಗಳ ಹೆಸರಿನಲ್ಲೇ “ಆಪತ್ಕಾಲಯಾನ” ಎಂಬ ಆಂಬ್ಯುಲೆನ್ಸ್ಗಳ ಸೇವೆಯನ್ನು ಒದಗಿಸುತ್ತಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ರಸ್ತೆ ಅಪಾಘಾತಕ್ಕೀಡಾದವರ ಗೋಲ್ಡನ್ ಅವಧಿಯ ಒಳಗಾಗಿ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ 65 ನೂತನ ಆಂಬ್ಯುಲೆನ್ಸ್ಗಳ ಸೇವೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯದಲ್ಲಿ ಪ್ರತಿ ವರ್ಷ 40 ಸಾವಿರ ಅಪಘಾತ ಪ್ರಕರಣಗಳು ನಡೆಯುತ್ತಿವೆ. ಸರಾಸರಿ 10 ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಅಪಘಾತಕ್ಕೆ ಒಳಗಾಗುವ ಜನರ ರಕ್ಷಣೆಗೆ ಪ್ರತ್ಯೇಕವಾಗಿ ಮುಖ್ಯಮಂತ್ರಿಗಳ ಹೆಸರಿನಲ್ಲೇ “ಆಪತ್ಕಾಲಯಾನ” ಆಂಬ್ಯುಲೆನ್ಸ್ಗಳ ಸೇವೆಯನ್ನು ಒದಗಿಸುತ್ತಿದ್ದೇವೆ. ಮುಂಬರುವ ವರ್ಷದಲ್ಲಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೂ ಈ ಯೋಜನೆ ವಿಸ್ತರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಬದ್ಧವಾಗಿದೆ ಎಂದರು.
ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರಾದ ಎಚ್.ಎಂ.ರೇವಣ್ಣ ಸೇರಿ ಹಲವು ನಾಯಕರು ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಆಂಬ್ಯುಲೆನ್ಸ್ಗಳು ಹೇಗೆ ಕಾರ್ಯನಿರ್ವಹಿಸಲಿವೆ?
- ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳ ಹತ್ತಿರದ ಆಸ್ಪತ್ರೆಗಳಲ್ಲಿ ಆಂಬ್ಯುಲೆನ್ಸ್ಗಳು ತಂಗಲಿವೆ.
- 65 ಹಾಟ್ಸ್ಪಾಟ್ಗಳನ್ನ ಗುರುತಿಸಲಾಗಿದ್ದು, ಆ ಸ್ಥಳಗಳ ಹತ್ತಿರದ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಿಗೆ ಆಂಬ್ಯುಲೆನ್ಸ್ಗಳನ್ನು ನೀಡಲಾಗಿದೆ.
- ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಡ್ವಾನ್ಸ್ ಲೈಫ್ ಸಪೋರ್ಟ್ (ALS) ಆಂಬ್ಯುಲೆನ್ಸ್ ಸೇವೆ ಲಭ್ಯವಾಗಲಿದೆ.
- ಜಿಲ್ಲಾಸ್ಪತ್ರೆಗಳ ಮಟ್ಟದಲ್ಲಿ ಚಿಕಿತ್ಸೆ ಅಗತ್ಯವಾದಲ್ಲಿ ಆರೋಗ್ಯ ಇಲಾಖೆಯ ಸ್ಟಾಫ್ ನರ್ಸ್ನ್ನು ಆಂಬ್ಯುಲೆನ್ಸ್ಗಳಿಗೆ ಡೆಪ್ಯೂಟ್ ಮಾಡಲಾಗುವುದು.
- ವೆಂಟೀಲೇಟರ್ ಸಹಾಯದೊಂದಿಗೆ ಜಿಲ್ಲಾಸ್ಪತ್ರೆಗಳಿಗೆ ರೋಗಿಗಳನ್ನ ಕರೆದೊಯ್ದು ಚಿಕಿತ್ಸೆ ಕೊಡಿಸುವ ಸೌಲಭ್ಯ ಒದಗಿಸಲಾಗಿದೆ.
- ಆಂಬ್ಯುಲೆನ್ಸ್ ಸುಸಜ್ಜಿತ ಉಪಕರಣಗಳು, ಔಷಧಿ ಹಾಗೂ ಉಪಭೋಗ್ಯ ವಸ್ತುಗಳನ್ನು ಹೊಂದಿರಲಿವೆ.
- ಈ ಪ್ರಕ್ರಿಯೆಯು ಅಪಘಾತಕ್ಕೆ ಒಳಗಾದ ವ್ಯಕ್ತಿಯ ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಅಲ್ಲದೇ ಸ್ಥಳಾಂತರಕ್ಕೆ ರೋಗಿಗಳ ಸ್ವಂತ ಹಣದ ವ್ಯಯವನ್ನು ತಪ್ಪಿಸಲಿದೆ.