ನಾಡಿನೆಲ್ಲೆಡೆ ಇಂದಿನಿಂದ ನವರಾತ್ರಿ, ದಸರಾ ಸಂಭ್ರಮ ಆರಂಭಗೊಳ್ಳಲಿದ್ದು, ವಿವಿಧ ದೇವಾಲಯಗಳನ್ನು ವಿದ್ಯುತ್ ದೀಪ, ಹೂವು, ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.
ಕರಾವಳಿಯ ಪ್ರಮುಖ ದೇವಸ್ಥಾನಗಳಲ್ಲಿ 9 ದಿನಗಳ ಕಾಲ ನವರಾತ್ರಿ ಅಂಗವಾಗಿ ವಿಶೇಷ ಪೂಜೆ, ಹತ್ತನೇ ದಿನ ವಿಜಯದಶಮಿ ಕಾರ್ಯಕ್ರಮ ನೆರವೇರಲಿದೆ.
ದ.ಕ. ಜಿಲ್ಲೆಯ ಪುರಾಣ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಹಿತ ವಿವಿಧ ದೇವಿ ಆಲಯಗಳಲ್ಲಿ ನವರಾತ್ರಿಯ ವಿಶೇಷ ಪೂಜೆ ನೆರವೇರಲಿದೆ.
ದಸರಾ ಹಿನ್ನೆಲೆಯಲ್ಲಿ ಮಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ, ಸರಕಾರಿ, ಖಾಸಗಿ ಕಟ್ಟಡಗಳನ್ನು ವಿದ್ಯುತ್ ದೀಪಾಲಂಕಾರಗೊಳಿಸಲಾಗಿದೆ.
ಪುತ್ತೂರಿನಲ್ಲಿಯೂ ಅದ್ದೂರಿಯಾಗಿ ಶಾರದೋತ್ಸವ ನೆರವೇರಲಿದ್ದು, ವಿದ್ಯುತ್ ದೀಪಾಲಂಕಾರಗೊಳಿಸಲಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ನವರಾತ್ರಿ ಉತ್ಸವ ಅ. 3ರಿಂದ ಒಂಭತ್ತು ದಿನಗಳ ಕಾಲ ನಡೆಯಲಿದೆ. ದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವಕ್ಕೆ ತಯಾರಿ ಕಾರ್ಯಗಳು ನಡೆದಿದೆ.
ದೇವಿ ದೇವಸ್ಥಾನಗಳಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ, ಹೋಮ, ಹವನ, ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಎಲ್ಲ ಪ್ರಮುಖ ದೇವಿ ದೇವಸ್ಥಾನಗಳಲ್ಲಿ ಅನ್ನ ಸಂತರ್ಪಣೆ ಜರುಗಲಿದೆ. ದೇವಸ್ಥಾನಗಳಲ್ಲಿ ವಿದ್ಯುತ್ ದೀಪ ಸಹಿತ ಹೂವಿನ ಅಲಂಕಾರ ಕಣ್ಮನ ಸೆಳೆಯುತ್ತಿದೆ.