ಚಿಕ್ಕಮಗಳೂರು : ಅಂಕೋಲಾದ ಶಿರೂರು, ಶಿರಾಡಿ ಘಾಟ್ ಭೂಕುಸಿತ ಹಾಗೂ ವಯನಾಡಿನ ದುರ್ಘಟನೆ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಚಿಕ್ಕಮಗಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಅನಧಿಕೃತ ಹೋಂಸ್ಟೇ, ರೆಸಾರ್ಟ್ ತೆರವಿಗೆ ಸಿದ್ಧತೆ ನಡೆಸಿದೆ.
ಚಿಕ್ಕಮಗಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿನ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾ ಬುಡನ್ಸ್ವಾಮಿ ದರ್ಗಾ, ಚಂದ್ರದ್ರೋಣ ಪರ್ವತದ ಸುತ್ತಮುತ್ತ ನಿರ್ಮಾಣವಾಗಿರುವ ಹೋಂಸ್ಟೇ, ರೆಸಾರ್ಟ್ ಮಾಲಿಕರು ತಮ್ಮ ಹೋಂಸ್ಟೇಗೆ ಸಂಬಂಧಿಸಿದ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸುವಂತೆ ಡಿಎಫ್ಒ ರಮೇಶ್ ಬಾಬು ಅವರು ನೋಟಿಸ್ ನೀಡಿದ್ದರು.
ದಾಖಲೆ ಪರಿಶೀಲನೆ ವೇಳೆ ಅನಧಿಕೃತವಾಗಿ ಹೋಂಸ್ಟೇ, ರೆಸಾರ್ಟ್ಗಳನ್ನು ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದೆ.
ಚಂದ್ರದ್ರೋಣ ಪರ್ವತದ ಸಾಲಿನ ಹುಕ್ಕುಂದ, ಮಲ್ಲೇನಹಳ್ಳಿ, ಅರಿಶಿಣಗುಪ್ಪೆ, ಅಲ್ಲಂಪುರ ಭಾಗದಲ್ಲಿ 30 ಅನಧಿಕೃತ ರೆಸಾರ್ಟ್, ಹೋಂಸ್ಟೇ ಪತ್ತೆಯಾಗಿವೆ. ಈ ಎಲ್ಲ ಅನಧಿಕೃತ ರೆಸಾರ್ಟ್, ಹೋಂಸ್ಟೇಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ತಯಾರಿ ನಡೆಸಿದೆ.

























