ಚಿಕ್ಕಬಳ್ಳಾಪುರ: ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕ ಪ್ರೇಮ ವಿವಾಹ ಎರಡೇ ವಾರಕ್ಕೆ ಮುರಿದುಬಿದ್ದಿದೆ. ಎದುರು ಬದುರು ಮನೆಯವರಾಗಿದ್ದ ಚಿಕ್ಕಬಳ್ಳಾಪುರ ತಾಲೂಕಿನ ಮೈಲಪನಹಳ್ಳಿ ಗ್ರಾಮದ ಫಸಿಯಾ ಹಾಗೂ ನಾಗಾರ್ಜುನ ಪರಸ್ಪರ ಪ್ರೀತಿಸುತ್ತಿದ್ದರು.
ಆದ್ರೆ, ಇಬ್ಬರ ಮದ್ವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಜೋಡಿ ಮನೆಬಿಟ್ಟು ಹೋಗಿ ಪ್ರೇಮ ವಿವಾಹವಾಗಿತ್ತು. ಆದ್ರೆ, ಇದೀಗ 15 ದಿನದಲ್ಲೇ ಈ ಪ್ರೇಮ ವಿವಾಹ ಅಂತ್ಯಕಂಡಿದೆ. ತಾಯಿಗೆ ಅನಾರೋಗ್ಯದ ಕಾರಣ ನೀಡಿ ಫಸಿಯಾ, ನಾಗಾರ್ಜುನನನ್ನು ಸಂಸಾರ ಎನ್ನುವ ಸಾಗರದ ನಡು ನೀರಿನಲ್ಲೇ ಬಿಟ್ಟು ತವರಿಗೆ ವಾಪಸ್ ಹೋಗಿದ್ದಾಳೆ. ಇದರಿಂದ ಫಸಿಯಾಳನ್ನು ನಂಬಿ ಹೋಗಿದ್ದ ನಾಗಾರ್ಜುನ ಈಗ ಕಂಗಾಲಾಗಿದ್ದಾನೆ.
ಮಾರ್ಚ್ 24ರಂದು ಪ್ರೇಮ ವಿವಾಹವಾಗಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದಿದ್ರು. ಆದ್ರೆ, ಇದೀಗ ಮದುವೆಯಾಗಿ 15 ದಿನ ಕಳೆಯೋದರೊಳಗೆ ಯುವತಿ ಫಸಿಹಾ ತಾಯಿ ಮನೆ ಸೇರಿಕೊಂಡಿದ್ದಾಳೆ. ತಾಯಿಗೆ ಅನಾರೋಗ್ಯ ಇದೆ. ನನ್ನ ನೋವಲ್ಲೇ ಕೊರಗಿ ನೋವಿನಲ್ಲಿದ್ದಾರೆ ಎನ್ನುವ ಕಾರಣ ನೀಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟು ತಾಯಿ ಮನೆ ವಾಪಸ್ ಹೋಗಿದ್ದಾಳೆ.
ಚಿಕ್ಕಬಳ್ಳಾಪುರ ತಾಲೂಕಿನ ಮೈಲಪನಹಳ್ಳಿ ಗ್ರಾಮದ 23 ವರ್ಷದ ಫಸಿಹಾ ಹಾಗೂ ಇದೇ ಗ್ರಾಮದ 25 ವರ್ಷದ ನಾಗಾರ್ಜುನ ಇಬ್ಬರು ಪರಸ್ಪರ 2 ವರ್ಷಗಳಿಂದ ಪ್ರೀತಿ ಮಾಡಿ ಕಳೆದ ತಿಂಗಳು ಮಾರ್ಚ್ 23 ರಂದು ಪ್ರೇಮವಿವಾಹವಾಗಿದ್ದರು. ಪ್ರೇಮ ವಿವಾಹಕ್ಕೆ ಯುವಕನ ಮನೆಯಲ್ಲಿ ಒಪ್ಪಿಗೆ ಇದ್ರೂ ಯುವತಿ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಹೀಗಾಗಿ ಮನೆ ಬಿಟ್ಟುಬಂದು ಮದುವೆಯಾಗಿ ಬಳಿಕ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು.
ಆಗ ಪೊಲೀಸರು ಎರಡೂ ಕಡೆಯ ಪೋಷಕರನ್ನ ಕರೆಸಿ ವಿಚಾರಣೆ ಮಾಡಿದ್ದರು. ಯುವತಿಯನ್ನ ಸಹ ಅವರ ಪೋಷಕರ ಜೊತೆ ಮಾತನಾಡಲು ಅವಕಾಶ ನೀಡಲಾಗಿತ್ತು. ಆ ವೇಳೆ ಪೋಷಕರು ಎಷ್ಟು ಬೇಡಿಕೊಂಡಿದ್ದರೂ ಸಹ ಯುವತಿ ಮಾತ್ರ ತಾನು ಮದುವೆಯಾದ ಯುವಕನ ಜೊತೆಯಲ್ಲೇ ಹೋಗುವುದಾಗಿ ಕಡ್ಡಿಮುರಿದಂತೆ ಹೇಳಿದ್ದಳು. ಆದ್ರೆ, ಇದೀಗ ಯುವತಿ, ಯುವಕನನ್ನು ನಡು ನೀರಿನಲ್ಲೇ ಕೈಕೊಟ್ಟು ಹೋಗಿದ್ದಾಳೆ.