ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ 2024-25ನೇ ಸಾಲಿನಲ್ಲಿ 950 ಕೋಟಿ ರೂ.ಗಳ ವ್ಯವಹಾರ ನಡೆಸಿ, ಹೊಸ ದಾಖಲೆ ನಿರ್ಮಿಸಿದೆ. ಬ್ಯಾಂಕ್ 3.45 ಕೋಟಿ ರೂ. ನಿವ್ವಳ ಲಾಭ ಗಳಿಸಿ, ಕಳೆದ ಸಾಲಿಗಿಂತ 259ಕೋಟಿ ಹೆಚ್ಚಿನ ವ್ಯವಹಾರ ನಡೆಸುವ ಮೂಲಕ ಹೊಸ ಸಾಧನೆಯನ್ನು ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಚ್. ಜಗನ್ನಾಥ ಸಾಲಿಯಾನ್ ಹೇಳಿದರು.
ಅವರು ಮಂಗಳವಾರ ವಿಟ್ಲ ಪ್ರಧಾನ ಶಾಖೆಯಲ್ಲಿ ಬ್ಯಾಂಕ್ ವ್ಯವಹಾರಗಳನ್ನು ಗ್ರಾಹಕರಿಗೆ ಮಾಹಿತಿ ಬಿಡುಗಡೆ ಮಾಡಿ ಮಾತನಾಡಿದರು.

ವಿಟ್ಲದಲ್ಲಿ ಪ್ರಧಾನ ಕಛೇರಿಯನ್ನು ಶಾಖೆಯಿಂದ ಪ್ರತ್ಯೇಕವಾಗಿ ಮಾಡುವ ಆಲೋಚನೆಯನ್ನು ಇಟ್ಟುಕೊಳ್ಳಲಾಗಿದೆ. ಎರಡು ಹೊಸ ಶಾಖೆ ತೆರೆಯುವ ಗುರಿಯನ್ನು ಇಟ್ಟುಕೊಳ್ಳಲಾಗಿದ್ದು, ಉಪ್ಪಿನಂಗಡಿಯಲ್ಲಿ 5ನೇ ಶಾಖೆ ತ್ವರಿತವಾಗಿ ಲೋಕಾರ್ಪಣೆ ನಡೆಯಲಿದೆ. ಜನರಿಗೆ ಅಗತ್ಯ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ. ಬ್ಯಾಂಕ್ ಹಿಂದಿನ ಹಲವಾರು ವರ್ಷದಿಂದ ಆಡಿಟ್ ವರ್ಗೀಕರಣದಲ್ಲಿ ’ಎ’ ತರಗತಿಯಲ್ಲಿದ್ದು, ಮುಂದೆಯೂ ಇದನ್ನು ಕಾಯ್ದಿರಿಸಿಕೊಳ್ಳಲಿದೆ. ಶೇ.22ಡಿವಿಡೆಂಡ್ ಕಳೆದ ಸಾಲಿನಲ್ಲಿ ನೀಡಿದೆ ಎಂದರು.
ಬ್ಯಾಂಕ್ ನಲ್ಲಿ 8515 ಮಂದಿ ಸದಸ್ಯರಿದ್ದು, 2.82 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. 134.73 ಕೋಟಿ ರೂ. ಠವಣಿ ಸಂಗ್ರಹಿಸಿದ್ದು, ಕಳೆದ ವರ್ಷಕ್ಕಿಂತ ಶೇ.5.93 ಹೆಚ್ಚಳವಾಗಿದೆ. 104.13 ಕೋಟಿ ರೂ ಹೊರ ಬಾಕಿ ಸಾಲವಿದ್ದು, ಶೇ. 93.10 ಸಾಲ ವಸೂಲಾತಿಯಾಗಿದೆ. 9.08 ಕೋಟಿ ರೂ ಮೀಸಲು ನಿಧಿ ಹಾಗೂ 12.43 ಕೋಟಿ ರೂ ಇತರ ನಿಧಿಯನ್ನು ಹೊಂದಿದೆ. 162.53 ಕೋಟಿ ರೂ. ದುಡಿಯುವ ಬಂಡವಾಳವಿದ್ದು, 2.40 ಕೋಟಿ ರೂ. ಗಳ ಚರ, ಸ್ಥಿರ ಆಸ್ತಿಯನ್ನು ಹೊಂದಿದೆ ಎಂದರು.
2025-26 ನೇ ಸಾಲಿನಲ್ಲಿ ಬ್ಯಾಂಕು 1000 ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸಿ, 3.90 ಕೋಟಿ ರೂಗೂ ಮೀರಿದ ಲಾಭ ದಾಖಲಿಸುವ ಗುರಿಹೊಂದಿದೆ. ಅಲ್ಲದೇ 155 ಕೋಟಿ ರೂ ಠೇವಣಿ ಸಂಗ್ರಹಿಸುವ, 125ಕೋಟಿಗೂ ಮೀರಿದ ಸಾಲ ನೀಡಿಕೆ ಹಾಗೂ ಶೇ.96 ಸಾಲ ವಸೂಲಾತಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಬ್ಯಾಂಕಿನ 32 ನುರಿತ ಸಿಬ್ಬಂದಿಗಳ ಪೂರ್ಣಸಹಕಾರದೊಂದಿಗೆ ಇದನ್ನು ಸಾಧಿಸಲಾಗುವುದು ಎಂದರು.
ಉಪಾಧ್ಯಕ್ಷ ಮನೋರಂಜನ್ ಕೆ.ಆರ್., ನಿರ್ದೇಶಕರಾದ ಮೋಹನ್ ಕೆ. ಎಸ್., ವಿಶ್ವನಾಥ್ ಎಂ, ಗೋವರ್ಧನ ಕುಮಾರ್ ಐ., ದಯಾನಂದ ಆಳ್ವ ಕೆ., ರಾಮದಾಸ ಶೆಣೈ, ಸತೀಶ್ ಪಿ., ಭಾಸ್ಕರ ಶೆಟ್ಟಿ, ಕೇಶವ ಎ., ದಿವಾಕರ ವಿ., ಜಯಂತಿ ಎಚ್. ರಾವ್, ಶುಭಲಕ್ಷ್ಮಿ, ಪೂವಪ್ಪ ಎಸ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ ಕೆ. ಉಪಸ್ಥಿತರಿದ್ದರು.