ನೆಲ್ಯಾಡಿ: ಅಪ್ರಾಪ್ತೆಯ ಜೊತೆ ಬಲಾತ್ಕಾರವಾಗಿ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭಿಣಿಯಾಗಲು ಕಾರಣನಾದ ಆರೋಪದಲ್ಲಿ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ರಮೇಶ ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
16 ವರ್ಷದ ಬಾದಿತೆಯು ಪ್ರಥಮ ವರ್ಷದ ಪಿಯುಸಿ ವಿದ್ಯಾಬ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿ ಮನೆಯಲ್ಲಿದ್ದು ದೂರದ ಸಂಬಂಧಿಕನೂ ಆದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ರಮೇಶ ಎಂಬಾತನ ಮನೆಗೆ ಫೆ.10ರಂದು ಹೋಗಿದ್ದು ಆ ದಿನ ರಾತ್ರಿ ಊಟ ಮಾಡಿ ಮಲಗಿದ್ದ ಸಮಯ ಆರೋಪಿ ರಮೇಶನು ಬಾದಿತೆ ಮಲಗಿದ್ದಲ್ಲಿಗೆ ಬಂದು ಬಲತ್ಕಾರವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ.
ನಂತರ ಮಾ.9, ಮಾ.27, ಮಾ.28 ರಂದು ಬಾದಿತೆಯ ಇಚ್ಚೆಗೆ ವಿರುದ್ದವಾಗಿ ದೈಹಿಕ ಸಂಪರ್ಕ ನಡೆಸಿರುತ್ತಾನೆ. ಮಾ.26 ರಂದು ಉಪ್ಪಿನಂಗಡಿ ಪೊಲೀಸರು, ಮಕ್ಕಳ ಸಹಾಯವಾಣಿ ಸಿಬ್ಬಂದಿ, ಶಿಶು ಅಭಿವೃದ್ಧಿ ಇಲಾಖೆಯವರು ಬಾದಿತೆಯನ್ನು ಆಕೆಯ ಮನೆಯಿಂದ ಕರೆದುಕೊಂಡು ಬಂದು ಮಂಗಳೂರು ಕಾವೂರಿನಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಸೇರಿಸಿದ್ದಾರೆ.
ಎ.1 ರಂದು ಬಾಲ ಮಂದಿರದ ಆಪ್ತ ಸಮಾಲೋಚಕರು ವಿಚಾರಣೆ ನಡೆಸಿದಾಗ ಬಾದಿತೆಯು ಆರೋಪಿ ರಮೇಶನು ಲೈಂಗಿಕ ಸಂಪರ್ಕ ಮಾಡಿರುವುದಾಗಿ ತಿಳಿಸಿದ್ದು, ಅದರಂತೆ ಎ.2ರಂದು ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಬಾದಿತೆ ಗರ್ಭಿಣಿ ಎಂಬುದು ತಿಳಿದುಬಂದಿದೆ.
ನಂತರ ಬಾದಿತೆಯು ಬಾಲಕಿಯರ ಬಾಲಮಂದಿರದ ಸಿಬ್ಬಂದಿಯವರ ಜೊತೆಯಲ್ಲಿ ಬಾಲ ಮಂದಿರಕ್ಕೆ ಹೋಗಿದ್ದಾರೆ. ಘಟನೆ ಕುರಿತು ಬಾದಿತೆ ನೀಡಿದ ದೂರಿನಂತೆ ಆರೋಪಿ ರಮೇಶನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.