ಕಾಸರಗೋಡು: ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಕಾಞಾಂಗಾಡ್ ನ ಮಾಣಿಕ್ಕೋತ್ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.
ಪಾಲೆಕ್ಕಿ ಅಝೀಝ್ ಎಂಬವರ ಪುತ್ರ ಆಫಾಝ್(9) ಮತ್ತು ಹೈದರ್ ಅವರ ಪುತ್ರ ಅನ್ವರ್ (11) ಮೃತಪಟ್ಟ ಮಕ್ಕಳು. ಇನ್ನೋರ್ವ ಬಾಲಕ ಅನ್ವರ್ ನ ಸಹೋದರ ಹಾಶಿಮ್ ನನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಜೆ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮಾಣಿ ಕ್ಕೋತ್ ಪಾಲೆಕ್ಕಿ ಮಸೀದಿಯ ಕೆರೆಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸ್ಥಳೀಯ ಜನರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಮಕ್ಕಳನ್ನು ನೀರಿನಿಂದ ಮೇಲಕ್ಕೆತ್ತುವಷ್ಟರಲ್ಲಿ ಇಬ್ಬರು ಮೃತಪಟ್ಟಿದ್ದರು.