ಪಟ್ಟೆ ಬಡಗನ್ನೂರು: ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಇದರ ವತಿಯಿಂದ ನಡೆಸಲ್ಪಡುವ ಶ್ರೀಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆ ಇಲ್ಲಿಗೆ ನೂತನವಾಗಿ ಶಾಲಾ ವಾಹನಗಳನ್ನು ಖರೀದಿಸಲಾಯಿತು.
ಸುಮಾರು ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು ಕಾಲ್ನಡಿಗೆ ಅಥವಾ ಸಾರ್ವಜನಿಕ ರಸ್ತೆ ಸಾರಿಗೆ ವ್ಯವಸ್ಥೆಯ ಮೇಲೆ ಅವಲಂಬಿತರಾಗಿದ್ದರು. ಇದರಿಂದ ಸಮಯಕ್ಕೆ ಸರಿಯಾಗಿ, ಸುರಕ್ಷಿತವಾಗಿ ಶಾಲೆ ತಲುಪಲು ಕಷ್ಟಸಾಧ್ಯವಾಗುತ್ತಿತ್ತು. ಗ್ರಾಮೀಣ ಪ್ರದೇಶವಾದುದರಿಂದ ಈ ವಿದ್ಯಾಸಂಸ್ಥೆಗೆ ಶಾಲಾ ವಾಹನವು ಅತ್ಯಂತ ಅವಶ್ಯಕವಾಗಿದ್ದು, ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ.
ಈ ಸಾಲಿನಲ್ಲಿ ಎರಡು ನೂತನ ವಾಹನಗಳನ್ನು ಖರೀದಿಸಿದ್ದು ಪುತ್ತೂರು, ಈಶ್ವರಮಂಗಲ ಸೇರಿದಂತೆ ಸುತ್ತಲಿನ ಎಲ್ಲಾ ಪ್ರದೇಶದ ವಿದ್ಯಾರ್ಥಿಗಳು ಶಾಲಾ ವಾಹನದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಹಾಗೂ ವಿದ್ಯಾರ್ಥಿಗಳ ನಿರಂತರ ಕಲಿಯುವಿಕೆ, ಸರ್ವತೋಮುಖ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದು ದ್ವಾರಕಾ ಪ್ರತಿಷ್ಠಾನ ಹಾಗೂ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ತಿಳಿಸಿದರು.
ಶಾಲಾ ವಾಹನಗಳು ಅತ್ಯಂತ ಸುಸಜ್ಜಿತವಾಗಿದ್ದು ಜಿಪಿಎಸ್ ಸೇರಿದಂತೆ ಆಧುನಿಕ ಸೌಲಭ್ಯಗಳನ್ನೊಳಗೊಂಡಿರುವುದರಿಂದ ವಿದ್ಯಾರ್ಥಿಗಳ ಸುರಕ್ಷೆ ಮತ್ತು ಪೋಷಕರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ಸಂಸ್ಥೆಯ ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ಶ್ರೀ ರಾಜಗೋಪಾಲ ಎನ್ ಹಾಗೂ ಪೌಢ ವಿಭಾಗದ ಮುಖ್ಯಗುರುಗಳಾದ ಶ್ರೀಮತಿ ಸುಮನಾ ಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.