ಕರಾವಳಿಯಲ್ಲಿ ಮತ್ತೊಮ್ಮೆ ಕೊರಗಜ್ಜನ ಪವಾಡ ನಡೆದಿದೆ. ದೈವ ನುಡಿದಂತೆ ದೇಗುಲದಲ್ಲಿ ಹುಂಡಿ ಕದ್ದ ಕಳ್ಳ ಕದ್ದಿರುವ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದಾನೆ.
ಉಡುಪಿಯ ಹೆಬ್ರಿ ತಾಲೂಕು ಮುದ್ರಾಡಿ ದೇಗುಲದಲ್ಲಿ ಈ ಘಟನೆ ನಡೆದಿದೆ. ಮೇ 25 ರಂದು ಕಳ್ಳನೋರ್ವ ಮುದ್ರಾಡಿ ಆದಿಶಕ್ತಿ ದೇಗುಲದ ಕಲ್ಕುಡ-ಕಲ್ಲುರ್ಟಿ, ಕೊರಗಜ್ಜ ಸನ್ನಿದಾನದ ಹುಂಡಿ ಕದ್ದು ಪರಾರಿಯಾಗಿದ್ದ. ಇದ್ರಿಂದ ಬೇಸರಗೊಂಡ ಧರ್ಮದರ್ಶಿ ಸುಕುಮಾರ್ ಮೋಹನ್ ದೈವದ ಮೊರೆ ಹೋಗಿದ್ದರು.
ಕಲ್ಕುಡ- ಕಲ್ಲುರ್ಟಿ ದೈವ ಹತ್ತು ದಿನಗಳಲ್ಲಿ ಕಳ್ಳನ ಪತ್ತೆ ಮಾಡಿಕೊಡುವುದಾಗಿ ಭರವಸೆ ನೀಡಿತ್ತು. ಕೊರಗಜ್ಜ ದೈವ 9 ದಿನದಲ್ಲೇ ಕಳ್ಳ ಮತ್ತೆ ಬಂದು ಸಿಕ್ಕಿ ಬೀಳುತ್ತಾನೆ ಎಂದು ಅಭಯ ನೀಡಿತ್ತು. ಅದ್ರಂತೆ ಮೂರೇ ದಿನಗಳಲ್ಲಿ ಕಳ್ಳ ಎರಡನೇ ಬಾರಿ ಹುಂಡಿ ಕದಿಯಲು ಬಂದಿದ್ದು, ಭಕ್ತರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ದಾವಣಗೆರೆ ಮೂಲದ ಸಲ್ಮಾನ್ ಎಂಬಾತ ಸೆರೆಯಾದ ಕಳ್ಳನಾಗಿದ್ದು, ದೈವದ ಅಭಯ ನಿಜವಾಗಿದ್ದಕ್ಕೆ ಭಕ್ತರು ಸಂತಸ ಪಟ್ಟಿದ್ದಾರೆ.