ವಿವಾಹಿತ ಪ್ರಿಯತಮೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಹರಿಣಿ (36) ಕೊಲೆಯಾದ ಮಹಿಳೆ, ಯಶಸ್ (25) ಕೊಲೆ ಆರೋಪಿ ಆಗಿದ್ದಾರೆ.
ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಯಶಸ್ ಹಾಗೂ ಇಬ್ಬರು ಮಕ್ಕಳ ತಾಯಿ ಹರಿಣಿ ಇಬ್ಬರೂ ಕೆಂಗೇರಿ ನಿವಾಸಿಗಳು. ಆರೋಪಿ ಯಶಸ್ ನಿನ್ನ ಜೊತೆ ಮಾತಾಡಬೇಕು ಬಾ ಎಂದು ಓಯೋ ರೂಂಗೆ ಕರೆದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಮದುವೆಯಾಗಿದ್ದ ಹರಿಣಿಗೆ ಯಶಸ್ ಜಾತ್ರೆಯಲ್ಲಿ ಪರಿಚಿತನಾಗಿದ್ದ. ಹರಿಣಿ, ಯಶಸ್ ಸ್ನೇಹಿತನ ಸಂಬಂಧಿಯಾಗಿದ್ದರು. ಕೆಲ ತಿಂಗಳುಗಳಿಂದ ಹರಿಣಿ, ಯಶಸ್ ಮಧ್ಯೆ ಒಡನಾಟ ಹೆಚ್ಚಾಗಿತ್ತು. ಇದೇ ವಿಚಾರಕ್ಕೆ ಹರಿಣಿ ಹಾಗೂ ಯಶಸ್ ಮನೆಯಲ್ಲಿ ಗಲಾಟೆಯೂ ಆಗಿತ್ತು.
ಮನೆಯಲ್ಲಿ ಗಲಾಟೆಯಾದ ಮೇಲೆ ಹರಿಣಿಯು ಯಶಸ್ನಿಂದ ಅಂತರ ಕಾಯ್ದುಕೊಂಡಿದ್ದಳು. ಕಳೆದ ಶುಕ್ರವಾರ ಸಂಜೆ ಆರೋಪಿ ಯಶಸ್, ಪೂರ್ಣಪ್ರಜ್ಞ ಲೇಔಟ್ನ ಓಯೋ ರೂಂಗೆ ಹರಿಣಿಯನ್ನು ಕರೆದಿದ್ದ. ಯಶಸ್ ಮಾತಿಗೆ ಹರಿಣಿ ಮನೆಯಲ್ಲಿ ಯಾರಿಗೂ ತಿಳಿಸದೇ ಭೇಟಿಯಾಗಲು ಬಂದಿದ್ದಳು. ಆಗ ಹರಿಣಿ ನನ್ನ ಸಹವಾಸಕ್ಕೆ ಇನ್ನು ಬರಬೇಡ ಬಿಟ್ಟು ಬಿಡು ಎಂದಿದ್ದಾರೆ.
ಹರಿಣಿ ಮಾತಿಗೆ ಕೋಪಗೊಂಡ ಯಶಸ್, ನೀನು ನನಗೆ ಬೇಕು. ನಿನ್ನ ಬಿಟ್ಟು ಇರೋಕೆ ಆಗಲ್ಲ. ನೀನು ನನ್ನಿಂದ ಅಂತರ ಕಾಯ್ದುಕೊಳ್ಳುತ್ತಾ ಇದ್ದಿಯಾ. ನನಗೆ ನೀನು ಸಿಗಲಿಲ್ಲ ಅಂದ್ರೆ ಇನ್ಯಾರಿಗೂ ಸಿಗಬಾರದು ಎಂದು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ವಿವಾಹಿತ ಮಹಿಳೆ ಹರಿಣಿಯ ಕೊಲೆ ಕೇಸ್ ದಾಖಲಾಗಿದ್ದು, ಆರೋಪಿ ಸಾಫ್ಟ್ವೇರ್ ಇಂಜಿನಿಯರ್ ಯಶಸ್ ಅವರನ್ನು ಅರೆಸ್ಟ್ ಮಾಡಲಾಗಿದೆ.