ಚಿಕ್ಕಮಗಳೂರು: ಟ್ರಕ್ಕಿಂಗ್ ಗೆಂದು ಬಂದು ದಟ್ಟ ಕಾಡಿನಲ್ಲಿ ದಾರಿ ತಪ್ಪಿ ಅಲೆದು ಸುಸ್ತಾಗಿ ಮೆಡಿಕಲ್ ಕಾಲೇಜಿನ ಹತ್ತು ಮಂದಿ ವಿದ್ಯಾರ್ಥಿಗಳು ನಿತ್ರಾಣಗೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನದುರ್ಗಾದಲ್ಲಿ ನಡೆದಿದೆ.
ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು ಮತ್ತು 5 ಹುಡುಗಿಯರು ಬಲ್ಲಾಳರಾಯನ ದುರ್ಗಾ ಕಡೆಯಿಂದ ಟಿಕೆಟ್ ಬುಕ್ ಮಾಡಿ, ಬಂಡಾಜೆ ಭಾಗದಿಂದ ಟ್ರಕ್ಕಿಂಗ್ ಹೊರಟಿದ್ದಾರೆ ಆದರೆ ಕಾಡಿನ ಮಧ್ಯೆ ಬರುತ್ತಿದ್ದಂತೆ ದಾರಿ ತಪ್ಪಿ ಕಾಡಿನಲ್ಲಿ ಅಲೆದು ಅಲೆದು ಸುಸ್ತಾಗಿದ್ದಾರೆ.
ದಾರಿ ತಪ್ಪಿದ ವಿಚಾರ ಗೊತ್ತಾಗುತ್ತಿದ್ದಂತೆ ಪೊಲೀಸರು, ಸ್ಥಳಿಯರು, ಅರಣ್ಯ ಇಲಾಖೆ ಸಿಬ್ಬಂದಿ ಕಾಡಿನಲ್ಲಿ ನಾಪತ್ತೆಯಾಗಿರುವ ಹತ್ತು ಮಂದಿಯ ಹುಡುಕಾಟ ಆರಂಭಿಸಿದ್ದಾರೆ ಆದರೆ ಎಲ್ಲೂ ಪತ್ತೆಯಾಗಿಲ್ಲ.
ಸಂಜೆ ಆರು ಗಂಟೆಗೆ ಆರಂಭಿಸಿದ ಕಾರ್ಯಾಚರಣೆಯಲ್ಲಿ ಬಾಳೂರು ಠಾಣಾಧಿಕಾರಿ ದಿಲೀಪ್ ಕುಮಾರ್ ಹಾಗೂ ಪೊಲೀಸರ ಜೊತೆ ಸ್ನೇಕ್ ಆರೀಫ್ ಸೇರಿ ಮಧ್ಯರಾತ್ರಿ 2 ಗಂಟೆಗೆ ವಿದ್ಯಾರ್ಥಿಗಳ ತಂಡವನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಕರೆ ತಂದಿದ್ದಾರೆ.
ಕೊನೆಗೆ ರಕ್ಷಣೆ ಮಾಡಿದ ಪೊಲೀಸರು ಹಾಗೂ ಸ್ಥಳೀಯರಿಗೆ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿ ತಮ್ಮ ಊರಿಗೆ ಮರಳಿದ್ದಾರೆ.