ಉಡುಪಿ: ಚಿಲ್ಲರೆ ಹಣಕ್ಕೆ ಸಂಬಂಧಿಸಿ ಮೆಡಿಕಲ್ ಶಾಪ್ನ ಮಹಿಳಾ ಸಿಬಂದಿ ಮತ್ತು ಗ್ರಾಹಕಿ ಮಧ್ಯೆ ಜಗಳ ಏರ್ಪಟ್ಟು ಮೆಡಿಕಲ್ ಶಾಪ್ನ ಸಿಬಂದಿಗೆ ಗ್ರಾಹಕಿ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಾವಿನಕಟ್ಟೆ ಎಂಬಲ್ಲಿ ನಡೆದಿದೆ.
ಗ್ರಾಹಕಿ ಯಾಸ್ಮಿನ್ ಹಲ್ಲೆ ಮಾಡಿದ ಆರೋಪಿ. ಮೆಡಿಕಲ್ ಶಾಪ್ ನ ಸಿಬಂದಿ ಲಕ್ಷ್ಮಿ ಹಲ್ಲೆಗೊಳಗಾದ ಯುವತಿ. ಮೆಡಿಕಲ್ ಶಾಪ್ ನಿಂದ ಔಷಧಿ ಖರೀದಿಸಿದ ಬಗ್ಗೆ ಗ್ರಾಹಕಿ ಯಾಸ್ಮಿನ್ ಐನೂರು ರೂಪಾಯಿ ನೋಟನ್ನು ನೀಡಿದ್ದರು. ಆಗ ಸಿಬಂದಿ ಲಕ್ಷ್ಮೀ ತನ್ನ ಬಳಿ 500 ರುಪಾಯಿ ಚಿಲ್ಲರೆಯಿಲ್ಲ ಎಂದು ಹೇಳಿ ಫೋನ್ ಪೇ ಮಾಡಲು ಸಲಹೆ ನೀಡಿದ್ದಾರೆ.
ಆಗ ಗ್ರಾಹಕಿ ಯಾಸ್ಮಿನ್ ಬೇರೆ ಅಂಗಡಿಯಿಂದ ಚಿಲ್ಲರೆ ತರುವಂತೆ ಹೇಳಿ ಏಕಾಏಕಿ ಲಕ್ಷ್ಮೀ ಅವರ ಕೆನ್ನೆಗೆ ಬಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಿಂದಿಸಿ ಹಲ್ಲೆ ಮಾಡಿರುವ ಬಗ್ಗೆ ಲಕ್ಷ್ಮಿ ಅವರು ಪೊಲೀಸರಿಗೆ ದೂರು ನೀಡಿದ್ದು, ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜಗಳದ ವೀಡಿಯೋ ಮತ್ತು ಆಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ದಲಿತ ಯುವತಿಯ ಮೇಲೆ ನಡೆದ ಹಲ್ಲೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸದ್ಯ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.