ಉಳ್ಳಾಲ: ಬಹುಮಹಡಿ ವಸತಿ ಸಮುಚ್ಚಯದ 12ನೇ ಮಹಡಿಯ ಬಾಲ್ಕನಿಯಿಂದ ಬಟ್ಟೆ ಒಣಗಲು ಹಾಕುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಎಸ್ಸೆಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ಉಳ್ಳಾಲ ತಾಲೂಕಿನ ಕುತ್ತಾರು ಎಂಬಲ್ಲಿ ಸಂಭವಿಸಿದೆ.
ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯಲ್ಲಿ ವೈದ್ಯ ದಂಪತಿಯಾಗಿರುವ ಡಾ. ಮುಮ್ತಾಜ್ ಅಹಮ್ಮದ್ ಮತ್ತು ಖಮ್ರಾಜ್ ಬಾನು ಅವರ ಹಿರಿಯ ಪುತ್ರಿ ಹಿಬಾ ಐಮನ್ (15) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ.
18 ಮಹಡಿ ಹೊಂದಿರುವ ಸಿಲಿಕೋನಿಯಾ ವಸತಿ ಸಂಕೀರ್ಣದ 12ನೇ ಮಹಡಿಯಲ್ಲಿ ವೈದ್ಯ ದಂಪತಿ ವಾಸ್ತವ್ಯ ಮಾಡುತ್ತಿದ್ದರು. ನಿನ್ನೆ ರಾತ್ರಿ ದಂಪತಿ ರಾತ್ರಿ ಪಾಳಿ ಕರ್ತವ್ಯಕ್ಕೆ ಆಸ್ಪತ್ರೆಗೆ ತೆರಳಿದ್ದರು.
ಮನೆಯಲ್ಲಿ ಹಿಬಾ ಮತ್ತು ಆಕೆಯ ಕಿರಿಯ ಸಹೋದರ ಮಾತ್ರ ಇದ್ದರು. ಹಿಬಾ ರಾತ್ರಿ ವೇಳೆ ಬಾಲ್ಕನಿಯಲ್ಲಿ ಬಟ್ಟೆ ಒಣಗಲು ಹಾಕಲೆಂದು ಸ್ಕೂಲ್ ಮೇಲೆ ನಿಂತಾಗ ಆಯತಪ್ಪಿ ವಸತಿ ಸಂಕೀರ್ಣದ ಕಟ್ಟಡದಿಂದ ಕೆಳಗಡೆ ಬಿದ್ದು ಮೃತ ಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಮೃತ ಹಿಬಾ ಮಂಗಳೂರಿನ ಯೆನಪೋಯ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು.
ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.