ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ದೇರಳಕಟ್ಟೆ ಕಾನೆಕೆರೆ ಎಂಬಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ.
ದೇರಳಕಟ್ಟೆ ಕಾನೆಕೆರೆ ನಿವಾಸಿ ಶಿವಾನಂದ ರೆಡ್ಡಿ ಎಂಬವರ ಪುತ್ರ ವಿನಯ್ ಕುಮಾರ್ (25) ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದವರು. ನಸುಕಿನ ಜಾವ ಹೃದಯ ಭಾಗದಲ್ಲಿ ನೋವುಂಟಾಗಿದ್ದು, ಕೆಲ ಕ್ಷಣಗಳಲ್ಲೇ ವಿನಯ್ ಸಾವನ್ನಪ್ಪಿದ್ದಾರೆ.
ನಡುಪದವು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿನಯ್ ಉದ್ಯೋಗದಲ್ಲಿದ್ದರು. ಶಬರಿಮಲೆ ಯಾತ್ರೆಗೆ ತೆರಳುವ ಸಂದರ್ಭ ಕಾಲಿಗೆ ಕಲ್ಲು ಚುಚ್ಚಿ, ಸೆಪ್ಟಿಕ್ ಆಗಿ ಬೆರಳನ್ನು ಕತ್ತರಿಸಲಾಗಿತ್ತು. ಈ ಹಿಂದೆ ದಪ್ಪ ಶರೀರವನ್ನು ಹೊಂದಿದ್ದ ವಿನಯ್ ಡಯೆಟಿಂಗ್ ಮೂಲಕ ತೂಕವನ್ನು ಇಳಿಸಿದ್ದರು.
ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ತನ್ನನ್ನು ಸಕ್ರಿಯವಾಗಿ ವಿನಯ್ ತೊಡಗಿಸಿಕೊಂಡಿದ್ದರು. ತಂದೆ ಶಿವಾನಂದ ರೆಡ್ಡಿಯವರು ಭಜನಾ ಸಂಕೀರ್ತನೆಯಲ್ಲಿ ಸಕ್ರಿಯ ಹಾರ್ಮೋನಿಯಂ ವಾದಕರಾಗಿದ್ದು, ಉಚಿತವಾಗಿ ಮಕ್ಕಳಿಗೆ ಹಾರ್ಮೋನಿಯಂ ಕಲಿಸಿಕೊಡುವವರಾಗಿದ್ದಾರೆ.
ಬಳ್ಳಾರಿ ಮೂಲದವರಾಗಿರುವ ಕುಟುಂಬ ಕಳೆದ 25 ವರ್ಷಗಳಿಂದ ದೇರಳಕಟ್ಟೆ ಕಾನೆಕೆರೆಯಲ್ಲಿ ವಾಸವಿದ್ದರು. ಮೃತ ವಿನಯ್ ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ