2 ದಿನಗಳ ಹಿಂದೆ ನಾಪತ್ತೆ ಆಗಿದ್ದ ಹರಿಯಾಣ ಮಾಡೆಲ್ ಶೀತಲ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಾಡೆಲ್ ಆಗಿದ್ದ ಶೀತಲ್ ಮೂಲತಃ ಖಲೀಲಾ ಮಜ್ರಾ ಗ್ರಾಮದವರು.. ಹರ್ಯಾನ್ವಿ ಆಲ್ಬಂಗಳ ಮೂಲಕ ಜನಪ್ರಿಯರಾಗಿದ್ದರು. ಪಾಣಿಪತ್ನ ಸತ್ಕರ್ತನ್ ಕಾಲೋನಿಯಲ್ಲಿ ತಮ್ಮ ಸಹೋದರಿ ಜೊತೆ ವಾಸವಾಗಿದ್ದರು.
ಜೂನ್ 14ರಂದು ಅಹರ್ ಚಿತ್ರೀಕರಣಕ್ಕಾಗಿ ಮಾಡೆಲ್ ಶೀತಲ್ ತೆರಳಿದ್ದರು. ಆದ್ರೆ ಶೂಟಿಂಗ್ಗೆ ಹೋಗಿದ್ದ ಶೀತಲ್ ಮನೆಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ ಆಕೆಯ ಸಹೋದರಿ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಮರು ದಿನ ಅಂದ್ರೆ ಸೋಮವಾರ ಖಾಂಡಾ ಗ್ರಾಮದ ಮೂಲಕ ಹಾದುಹೋಗುವ ಕಾಲುವೆಯಲ್ಲಿ ಯುವತಿಯ ಮೃತದೇಹ ಪತ್ತೆ ಆಗಿತ್ತು. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮಾಡೆಲ್ ಅವರದ್ದೇ ಎಂದು ಗೊತ್ತಾಗಿ, ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.
ಕತ್ತು ಸೀಳಿ ನಾಲೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಮಾಡೆಲ್ ಶೀತಲ್ನ ಸಹೋದರಿ ನೀಡಿರುವ ದೂರಿನ ಪ್ರಕಾರ, ಶೀತಲ್ಗೆ ಅವಳ ಮಾಜಿ ಸ್ನೇಹಿತ ಸುನಿಲ್ ತನ್ನ ಜೊತೆ ಬರುವಂತೆ ಬಲವಂತ ಮಾಡ್ತಿದ್ದಾನೆಂದು ಹೇಳಿದ್ದಳಂತೆ.. ಹೀಗಾಗಿ ಆತನ ಮೇಲೆ ಅನುಮಾನ ವ್ಯಕ್ತವಾಗಿದೆ.
ಶೀತಲ್ ಈ ಹಿಂದೆ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದಳು. ಆಗ ಶೀತಲ್ಗೆ ಸುನಿಲ್ ಎಂಬಾತನ ಪರಿಚಯವಾಗಿತ್ತು. ತನ್ನನ್ನು ಮದುವೆ ಆಗುವಂತೆ ಶೀತಲ್ಗೆ ಸುನಿಲ್ ಒತ್ತಾಯಿಸಿದ್ದನಂತೆ. ಆದ್ರೆ ಸುನಿಲ್ಗೆ ಈಗಾಗಲೇ ಮದುವೆ ಆಗಿ ಮಕ್ಕಳೂ ಇದ್ದಾವೆ. ಈ ವಿಷಯ ತಿಳಿದು ಶೀತಲ್ ಹೋಟೆಲ್ ಕೆಲಸ ಬಿಟ್ಟು, ಸುನಿಲ್ನಿಂದ ದೂರ ಆಗಿದ್ದಳು. ಆದರೂ ಸುನಿಲ್ ಆಕೆಯ ಹಿಂದೆ ಬಿದ್ದು ಒತ್ತಾಯಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾಡೆಲ್ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದು, ಶೀಲತ್ನ ಸ್ನೇಹಿತನಿಗಾಗಿ ಬಲೆ ಬೀಸಿದ್ದಾರೆ.