ಹೆಜಮಾಡಿ ಟೋಲ್ ಪ್ಲಾಜಾದ ಬಳಿ ಪಾರ್ಕ್ ಮಾಡಲಾದ ಲಾರಿಯೊಂದರ ಹಿಂಬದಿಗೆ ಇನೋವಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ಇಂದು ಬೆಳಗ್ಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಸಂಭವಿಸಿದೆ.
ಕೋಡಿಕೆರೆ ನಿವಾಸಿ ಲೋಕೇಶ್ (43) ಹಾಗೂ ಕುಳಾಯಿ ನಿವಾಸಿ ವಿರಾಜ್(29) ಗಾಯಗೊಂಡವರು. ಇವರು ಕಾರ್ಯಕ್ರಮಕ್ಕೆ ತೆರಳಿ ಬೆಳಗ್ಗಿನ ಜಾವ ವಾಪಾಸಾಗುತ್ತಿದ್ದಾಗ, ಈ ಘಟನೆ ನಡೆದಿದೆ. ಮರದ ದಿಮ್ಮಿಗಳನ್ನು ಹೇರಿಕೊಂಡಿದ್ದ ಲಾರಿಯನ್ನು ಹೆಜಮಾಡಿ ಟೋಲ್ ಗೇಟಿನ ಕೆಲವೇ ಮೀಟರ್ ಗಳ ಅಂತರದಲ್ಲಿ ಪಾರ್ಕ್ ಮಾಡಲಾಗಿತ್ತು. ಇದನ್ನು ಗಮನಿಸದ ಕಾರು ಚಾಲಕ ಹಿಂಬದಿಯಿಂದ ಗುದ್ದಿದ್ದಾನೆ. ಡಿಕ್ಕಿಯ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿಕೊಂಡಿದ್ದ ವಿರಾಜ್ ರನ್ನು ಹೊರತೆಗೆಯಲು ಸ್ಥಳೀಯರು ಮತ್ತು ಟೋಲ್ ಸಿಬ್ಬಂದಿ ಶ್ರಮಿಸಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಾಳುಗಳಿಬ್ಬರನ್ನೂ ಮಂಗಳೂರಿನ ಎಜೆ ಆಸ್ಪತ್ರೆಗೆ ಸಾಗಿಸಲಾಗಿದ್ದು. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸಿದ್ದಾರೆ.