ದೇಶದಲ್ಲೇ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಪ್ರಾಣಿಗಳ ವಿನಿಮಯ ಯೋಜನೆ ಅಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ 4 ಸಾಕಾನೆಗಳನ್ನ ಜಪಾನ್ಗೆ ರವಾನೆ ಮಾಡಲಾಗುತ್ತಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ 4 ಆನೆಗಳನ್ನು ಬೃಹತ್ ಸರಕು ಸಾಗಾಣೆ ವಿಮಾನದಲ್ಲಿ ಸಾಗಾಣೆ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಪ್ರಾಣಿಗಳ ವಿನಿಮಯ ಯೋಜನೆ ಅಡಿಯಲ್ಲಿ ಸಾಕಾನೆಗಳಾದ ಸುರೇಶ್, ತುಳಸಿ, ಗೌರಿ ಹಾಗೂ ಶ್ರುತಿಯನ್ನು ಇಂದು ಜಪಾನಿಗೆ ರವಾನೆ ಮಾಡಲಾಗುತ್ತಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಸಾಕಾನೆ ಸುರೇಶ್, ತನ್ನ ಬಾಲ್ಯದ ಗೆಳೆಯ ಬಸವನನ್ನು ಬಿಟ್ಟು ಬರಲು ಒಪ್ಪಲಿಲ್ಲ. ಮಾವುತರು ಒತ್ತಾಯ ಮಾಡಿದರೂ ಕೆಲ ಕಾಲ ಸ್ನೇಹಿತ ಬಸವನನ್ನು ಅಪ್ಪಿಕೊಂಡ ಸುರೇಶ್ ವಲ್ಲದ ಮನಸ್ಸಿನಿಂದ ಕೇಜಿನತ್ತ ಹೆಜ್ಜೆ ಹಾಕಿದ್ದಾನೆ. ಗೌರಿ ಮತ್ತು ಶ್ರುತಿ ಸಹ ಹಠ ಮಾಡಿದ್ದು, ಕೊನೆಗೆ ತುಳಸಿ ಜೊತೆ ಸಾಕಾನೆ ಸುರೇಶ್ ಹಿಂಬಾಲಿಸಿದೆ.
ಇನ್ನೂ 2023ರಿಂದಲೂ ಅಂತರಾಷ್ಟ್ರೀಯ ಪ್ರಾಣಿಗಳ ವಿನಿಮಯಕ್ಕೆ ಪ್ರಯತ್ನ ನಡೆಯುತ್ತಿದ್ದು, ಕೇಂದ್ರೀಯ ಮೃಗಾಲಯ ಪ್ರಾಧಿಕಾರ. ಜಪಾನ್ ಮತ್ತು ಭಾರತದ ರಾಯಭಾರಿ ಕಛೇರಿಗಳು ಸೇರಿದಂತೆ ಪ್ರಮುಖ ಇಲಾಖೆಗಳ ಸಹಕಾರದಿಂದ ಇಂದು ಸಾಧ್ಯವಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ 4 ಆನೆಗಳು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನ್ನ ಒಸಾಕಾ ಕಾನ್ಲೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾತಾರ್ ಏರ್ ವೇಸ್ B777-200F ಸರಕು ಸಾಗಣೆ ವಿಮಾನ (Cargo Plane) ದಲ್ಲಿ ಕರೆದೊಯ್ಯಲಾಗುತ್ತಿದೆ.

ಸುಮಾರು 8 ತಾಸು ವಿಮಾನ ಪ್ರಯಾಣ ಇರಲಿದ್ದು, ಈಗಾಗಲೇ ಕಳೆದ ಮೂರು ತಿಂಗಳಿಂದ ಆನೆಗಳಿಗೆ ತರಬೇತಿ ನೀಡಲಾಗಿತ್ತು. ಜಪಾನ್ನಿಂದ ಆಗಮಿಸಿದ್ದ ಮಾವುತರಿಗೆ ತರಬೇತಿ ಕೂಡ ನೀಡಲಾಗಿತ್ತು. ಜೊತೆಗೆ ಸಾಕಾನೆಗಳು ಅಲ್ಲಿನ ವಾತವರಣಕ್ಕೆ ಒಗ್ಗಿಕೊಳ್ಳುವ ಸಲುವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಬ್ಬರು ವೈದ್ಯಾಧಿಕಾರಿಗಳು, ನಾಲ್ವರು ಮಾವುತರು, ಓರ್ವ ಮೇಲ್ವಿಚಾರಕ ಮತ್ತು ಜೀವಶಾಸ್ತ್ರಜ್ಞೆ 15 ದಿನಗಳ ಮಟ್ಟಿಗೆ ತೆರಳಲಿದ್ದು, ಮಾವುತರು ಭಾರದ ಮನಸ್ಸಿನಲ್ಲಿ ಸಾಕಾನೆಗಳನ್ನು ಕಳುಹಿಸಿ ಕೊಟ್ಟಿದ್ದಾರೆ.