ಪುತ್ತೂರು:ಮದುವೆಯಾಗುವುದಾಗಿ – ನಂಬಿಸಿ ಯುವತಿಗೆ ವಂಚನೆ ಪ್ರಕರಣದ ಆರೋಪಿತನ ತಂದೆಯನ್ನು ದೇವಸ್ಥಾನದಿಂದ – ವಜಾಗೊಳಿಸುವಂತೆ ವಿಶ್ವಕರ್ಮ ಯುವಮಿಲನ್ ನಿಯೋಗ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಶಾರದಾ ಭಜನಾ ಮಂದಿರಕ್ಕೆ ಮನವಿ ಸಲ್ಲಿಸಿದೆ.
ಪ್ರಕರಣದ ಆರೋಪಿ ಶ್ರೀಕೃಷ್ಣಾ ಜೆ.ರಾವ್ ಅವರ ತಂದೆ ಪಿ.ಜಿ.ಜಗನ್ನಿವಾಸ ರಾವ್ ಅವರು, ಸಂತ್ರಸ್ತ ಯುವತಿಯನ್ನು ತನ್ನ ಮಗನೊಂದಿಗೆ ಮದುವೆ ಮಾಡಿಸುವುದಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಒಪ್ಪಿಗೆ ಪತ್ರ ನೀಡಿ ಬಳಿಕ, ನನ್ನ ಮಗನ ಆರೋಪ ಸಾಬೀತಾಗಿಲ್ಲ ಎಂದು ಹೇಳುತ್ತಾ ಹಿಂದಕ್ಕೆ ಸರಿದು ವಚನ ಭ್ರಷ್ಟರಾಗಿದ್ದಾರೆ. ಇದಲ್ಲದೆ ಅವರು ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಇರುವುದು ಅವರ ಮಗನ ಕೃತ್ಯಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ.
ದೇವಸ್ಥಾನದ ಹೆಸರಿಗೆ ಕುಂದುಂಟು ಮಾಡುವ ಯಾವುದೇ ವ್ಯಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಹೊರಗಿರಿಸಿಕೊಳ್ಳುವುದು ಆಡಳಿತದ ಘನತೆಯಾಗಿದೆ.ಹಿಂದೆ ಬ್ರಹ್ಮವಾಹಕರಿಂದ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯಾಯಿತೆಂದು ಅಂದಿನ ಅಧ್ಯಕ್ಷರು ತಕ್ಷಣ ಅವರನ್ನು ವಜಾಗೊಳಿಸಿದ್ದ ಕ್ರಮವನ್ನು ಇಲ್ಲಿ ನಾವು ಶ್ಲಾಘಿಸುತ್ತೇವೆ.
ಅದರಂತೆ ಪಿ.ಜಿ.ಜಗನ್ನಿವಾಸ ರಾವ್ ಅವರನ್ನೂ ಕೂಡಾ ವಜಾಗೊಳಿಸಬೇಕು ಎಂದು ಆಗ್ರಹಿಸಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರಿಗೆ ನಿಯೋಗ ಮನವಿ ಸಲ್ಲಿಸಿದೆ.
ಶಾರದಾ ಭಜನಾ ಮಂದಿರದಿಂದಲೂ ಅವರನ್ನು ವಜಾಗೊಳಿಸುವಂತೆ ಮಂದಿರದ ಪ್ರಧಾನ ಕಾರ್ಯದರ್ಶಿಯವರಿಗೆ ಮನವಿ ನೀಡಲಾಗಿದೆ. ನಿಯೋಗದಲ್ಲಿ ವಿಶ್ವಕರ್ಮ ಯುವಮಿಲನ್ ಅಧ್ಯಕ್ಷ, ರಾಜ್ಯ ಸಮಿತಿ ಸದಸ್ಯ ಸುಬ್ರಹ್ಮಣ್ಯ ಆಚಾರ್ಯ, ತಾಲೂಕು ಅಧ್ಯಕ್ಷ ಹರೀಶ್ ಆಚಾರ್ಯ ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಪಾಲ್ತಾಡಿ, ಕೋಶಾಧಿಕಾರಿ ಜಗದೀಶ ಆಚಾರ್ಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.