ದಿನಾಂಕ:03-09-2025 ರಂದು ಸಂಜೆ ಮಹಿಳೆಯೋರ್ವರು ದ್ವಿಚಕ್ರ ವಾಹನದಲ್ಲಿ ತನ್ನ ಮಗನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಾ, ಮನೆಯ ಸಮೀಪ ತಲುಪುತ್ತಿದ್ದಂತೆ, ಆರೋಪಿ ಅಶ್ರಫ್ ಎಂಬಾತನು ಕತ್ತಿಯನ್ನು ಹಿಡಿದುಕೊಂಡು ಬಂದು ಸ್ಕೂಟರಿನಲ್ಲಿದ್ದಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಕತ್ತಿಯಿಂದ ಹಲ್ಲೆಗೆ ಯತ್ನಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.
ಈ ವೇಳೆ ಮಹಿಳೆಯ ಬೆರಳುಗಳಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ. ಈ ವೇಳೆ ಬೊಬ್ಬೆ ಕೇಳಿ ಮಹಿಳೆಯ ತಾಯಿ ಹಾಗೂ ನೆರೆಕೆರೆಯವರು ಓಡಿ ಬರುತ್ತಿರುವುದನ್ನು ಕಂಡು ಆರೋಪಿಯು ಜೀವ ಬೆದರಿಕೆ ಹಾಕಿ ತೆರಳಿರುತ್ತಾನೆ.
ಹಲ್ಲೆಯಿಂದಾದ ಗಾಯಗಳಿಗೆ ಮಹಿಳೆಯು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 113/2025, ಕಲಂ : 74, 109, 118(1), 351(2) ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಆರೋಪಿ ಅಶ್ರಫ್ ಡಿ ಪ್ರಾಯ 33 ವರ್ಷ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.