ಪುತ್ತೂರು ನಿವಾಸಿಯೊಬ್ಬರ ಮಾಲಿಕತ್ವದಲ್ಲಿರುವ ಜಮೀನಿನ ಆರ್ಟಿಸಿಯನ್ನು ತನ್ನ ಹೆಸರಿನಲ್ಲಿರುವ ಜಮೀನಿನ ಆರ್ಟಿಸಿಯೆಂದು ನಂಬಿಸಿ, ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ದ.ಕ ಜಿಲ್ಲೆ ಮಂಗಳೂರು ನ್ಯಾಯಾಲಯಕ್ಕೆ ನೀಡಿ ಆರೋಪಿಗೆ ಜಾಮೀನು ನೀಡುವಂತೆ ಮಾಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ 84/2025 ಕಲಂ 417, 419, 467, 468, 471 ಐ. ಪಿ. ಸಿ ಪ್ರಕರಣ ದಾಖಲಾಗಿರುತ್ತದೆ.
ಸದ್ರಿ ಪ್ರಕರಣದ ತನಿಖೆ ನಡೆಸಲಾಗಿ, ಪ್ರಕರಣದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಿರ್ಯಾದುದಾರರೆಂದು ಹೇಳಿಕೊಂಡು, ನಕಲಿ ಸಹಿ ಮಾಡಿ ನ್ಯಾಯಾಲಯಕ್ಕೆ ವಂಚಿಸುವ ಉದ್ದೇಶದಿಂದ, ಬೆಲೆಬಾಳುವ ಭದ್ರತಾ ಪತ್ರವನ್ನು ನೀಡಿದ ಆರೋಪಿ ಅಬ್ದುಲ್ ಹಾಶೀಮ್ (34), ವಾಸ: ಪಡುವನ್ನೂರು ಗ್ರಾಮ, ಪುತ್ತೂರು ಎಂಬಾತನನ್ನು ದಿನಾಂಕ 06.11.2025 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿರುತ್ತದೆ.



























