ದಿನಾಂಕ: 29-11-2025 ರಂದು ಬೆಳಗ್ಗೆ, ಯಾರೋ ಕಳ್ಳರು ವಾಹನವೊಂದರಲ್ಲಿ ಗೋವುಗಳನ್ನು ಸಾಗಿಸುವ ವೇಳೆಯಲ್ಲಿ, ಸದ್ರಿ ವಾಹನ ರಸ್ತೆಯಲ್ಲಿ ಕೆಟ್ಟುಹೋಗಿರುವುದರಿಂದ, ವಾಹನದಲ್ಲಿದ್ದ ಗೋವುಗಳನ್ನು ಪುತ್ತೂರು, ನರಿಮೊಗರು ಎಂಬಲ್ಲಿ ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದು, ಅವುಗಳನ್ನು ಸ್ಥಳೀಯರ ಸಹಕಾರದಿಂದ ಪುತ್ತೂರು ನಗರ ಠಾಣೆಗೆ ಹಸ್ತಾಂತರಿಸಿದ ಘಟನೆ ನಡೆದಿದ್ದು.
ಗೋವುಗಳನ್ನು ಯಾರೋ ಕಳ್ಳರು ಕದ್ದು ತಂದಿರಬಹುದೆಂದು ಸಂಶಯವಿದ್ದು, ಕೃತ್ಯವೆಸಗಿದ ಆರೋಪಿಗಳನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪಾಣಾಜೆ ನಿವಾಸಿ ಪ್ರೇಮ್ ರಾಜ್ ನೀಡಿದ ದೂರಿನಂತೆ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 117/2025, ಕಲಂ: 4, 5 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ ಮತ್ತು ಕಲಂ: 303(1) BNS 2023 ಮತ್ತು 106 BNSS -2023 ರಂತೆ ಪ್ರಕರಣ ದಾಖಲಾಗಿರುತ್ತದೆ.
ಸದ್ಯ ಪ್ರಕರಣದ ತನಿಖೆ ನಡೆಸಲಾಗಿ, ಆರೋಪಿಗಳಾದ ಉಳ್ಳಾಲ ಸಜಿಪನಡು ನಿವಾಸಿಗಳಾದ ಆಶಿಕ್ ಪಾಷಾ (26) ಹಾಗೂ ಅಬ್ದುಲ್ ಲತೀಫ್ (25) ಎಂಬವರುಗಳು ಕೆಎ 52 4889 ನೋಂದಣಿಯ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ 4 ಕರುಗಳನ್ನು ಹಾಗೂ ಒಂದು ದನವನ್ನು ಸಾಗಿಸುವ ವೇಳೆ ವಾಹನ ದುರಸ್ತಿಗೀಡಾದ್ದರಿಂದ, ಆರೋಪಿಗಳು ಸದ್ರಿ ಜಾನುವಾರುಗಳನ್ನು ರಸ್ತೆಯಲ್ಲಿ ಬಿಟ್ಟು ವಾಹನದೊಂದಿಗೆ ತೆರಳಿರುವುದು ತಿಳಿದುಬಂದಿರುತ್ತದೆ. ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.




























