ಮಂಗಳೂರು: 1997ರಲ್ಲಿ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್” ಸದಸ್ಯನನ್ನು ಮಂಗಳೂರು ಉರ್ವಾ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ @ ಕೆ. ಕೃಷ್ಣಪ್ಪ @ ಕೃಷ್ಣ (55) ಎಂದು ಗುರುತಿಸಲಾಗಿದೆ. ಈತ ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲೂಕು ದಂಡುಪಾಳ್ಯ ಗ್ರಾಮದ ನಿವಾಸಿಯಾಗಿದ್ದು, ಇತ್ತೀಚೆಗೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಳ್ಳಿಯ ವಿಜಯನಗರ ಕಾಲೋನಿಯಲ್ಲಿ ತಲೆಮರೆಸಿಕೊಂಡಿದ್ದನು. ಉರ್ವಾ ಠಾಣಾ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಈ ಪ್ರಕರಣವು ಉರ್ವಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 113/1997ರ ಅಡಿಯಲ್ಲಿ ದಾಖಲಾಗಿದ್ದು, ಐಪಿಸಿ ಕಲಂ 460, 396 ಹಾಗೂ 400ರ ಅಡಿ ತನಿಖೆ ನಡೆದಿತ್ತು.
1997ರ ಅಕ್ಟೋಬರ್ 11ರಂದು ಮಧ್ಯರಾತ್ರಿ ಉರ್ವಾ ಮಾರಿಗುಡಿ ಕ್ರಾಸ್ ಸಮೀಪದ ಅನ್ವರ್ ಮಹಲ್ ಮನೆಗೆ ನುಗ್ಗಿದ ದಂಡುಪಾಳ್ಯ ಗ್ಯಾಂಗ್ ಸದಸ್ಯರು, ಮನೆಯಲ್ಲಿದ್ದ 80 ವರ್ಷದ ಶ್ರೀಮತಿ ಲೂವಿಸ್ ಡಿಮೆಲ್ಲೋ ಹಾಗೂ 19 ವರ್ಷದ ರಂಜಿತ್ ವೇಗಸ್ ಅವರನ್ನು ಹತ್ಯೆ ಮಾಡಿ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ಆರೋಪಿಗಳ ವಿರುದ್ಧ ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಎಸ್.ಸಿ. ನಂ. 728/2010 ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಆವರಣದಲ್ಲಿರುವ 34ನೇ ಅಪರ ನಗರ ಸಿವಿಲ್ ಮತ್ತು ಸೆಷನ್ ನ್ಯಾಯಾಲಯವು ವಿಚಾರಣೆ ನಡೆಸಿ, ದೊಡ್ಡ ಹನುಮ ಸೇರಿ ಐದು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು.
ಆದರೆ ಆರೋಪಿ ಚಿಕ್ಕ ಹನುಮ ತನ್ನ ಹೆಸರನ್ನು ಬದಲಾಯಿಸಿಕೊಂಡು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ 2010ರಲ್ಲಿ ಮಂಗಳೂರು JMFC 2ನೇ ನ್ಯಾಯಾಲಯವು LPC ವಾರಂಟ್ ಹೊರಡಿಸಿತ್ತು. ಕರ್ನಾಟಕ ರಾಜ್ಯದಲ್ಲಿ ಈತನ ಮೇಲೆ ಸುಮಾರು 13 ಕೊಲೆ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿರುವ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ಯಶಸ್ವಿ ಪತ್ತೆ ಕಾರ್ಯವನ್ನು ಉರ್ವಾ ಪೊಲೀಸ್ ಠಾಣೆಯ ನಿರೀಕ್ಷಕ ಶ್ಯಾಮ್ ಸುಂಧರ್ ಹೆಚ್.ಎಂ, ಪಿಎಸ್ಐಗಳಾದ ಗುರುಪ್ಪ ಕಾಂತಿ, ಎಲ್. ಮಂಜುಳಾ, ಎಎಸ್ಐ ವಿನಯ ಕುಮಾರ್ ಹಾಗೂ ಸಿಬ್ಬಂದಿಗಳಾದ ಲಲಿತಲಕ್ಷ್ಮಿ, ಅನಿಲ್, ಪ್ರಮೋದ್, ಆತ್ಮಾನಂದ ಮತ್ತು ಹರೀಶ್ ಅವರು ನಡೆಸಿದ್ದಾರೆ.
ಈ ಸಾಧನೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ತಂಡವನ್ನು ಪ್ರಶಂಸಿಸಿದ್ದು, ಹೆಚ್ಚಿನ ಬಹುಮಾನಕ್ಕಾಗಿ ಕರ್ನಾಟಕ ರಾಜ್ಯದ ಡಿಜಿ & ಐಜಿಪಿ ಅವರಿಗೆ ಶಿಫಾರಸು ಮಾಡಲಾಗಿದೆ.


























