ಕಾರೊಂದು ರಿಕ್ಷಾಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದು ಪರಾರಿಯಾಗಿದ್ದು, ರಿಕ್ಷಾ ಚಾಲಕ ಎದುರಿನಿಂದ ಬಂದ ಲಾರಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಡಗು ಸಂಪಾಜೆ ಗೇಟಿನ ಬಳಿ ಸಂಭವಿಸಿದೆ.
ರಿಕ್ಷಾ ಸಂಪಾಜೆ ಗೇಟಿನಿಂದ ಚೆಡಾವು ಕಡೆ ತೆರಳುತ್ತಿದ್ದು ಕೊಡಗು ಸಂಪಾಜೆ ಪೆಟ್ರೋಲ್ ಪಂಪ್ ಬಳಿಯ ತಿರುವಿನಲ್ಲಿ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದು ಪರಾರಿಯಾಗಿದ್ದು ಈ ವೇಳೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಚಕ್ರಗಳ ಕೆಳಗೆ ಸಿಲುಕಿ ರಿಕ್ಷಾ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತರನ್ನು ಬಿಸೆಲುಮನೆ ರಾಮಣ್ಣ ಗೌಡ ಅವರ ಪುತ್ರ ಸುಂದರ್ ಚಿಟ್ಟಿಕ್ಕಾನ (56) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕ ಕೂಡ ಗಾಯಗೊಂಡಿದ್ದಾರೆ.
ಸುಂದರ್ ಈ ಹಿಂದೆ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾಗಿ ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಪಘಾತದ ಸಮಯದಲ್ಲಿ, ಅವರು ಗ್ರಾಮ ಪಂಚಾಯತ್ ಸದಸ್ಯೆ ಅನಿತಾ ಅವರ ತಾಯಿ ಪದ್ಮಾವತಿ ಅವರನ್ನು ಸಂಪಾಜೆಯಿಂದ ಚೆಡಾವು ಬಳಿಯ ಅವರ ನಿವಾಸಕ್ಕೆ ಕರೆದೊಯ್ಯುತ್ತಿದ್ದರು.
ರಿಕ್ಷಾದ ಚಾಲಕ ಸುಂದರ ಅವರ ಸಾವಿಗೆ ಕಾರಣವಾದ ಕಾರನ್ನು ಮಡಿಕೇರಿ ಸಮೀಪದ ಕಾಟಕೇರಿಯಲ್ಲಿ ಮಡಿಕೇರಿ ಪೋಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಲ್ಲಿದ್ದವರು ಮೈಸೂರಿನವರೆಂದು ತಿಳಿದುಬಂದಿದ್ದು ಅವರನ್ನು ಪೋಲೀಸರು ತಮ್ಮ ವಶ ಇರಿಸಿಕೊಂಡಿದ್ದಾರೆ. ವಿಚಾರಣೆ ಮುಂದುವರಿದಿದೆ.

























