ವಿಟ್ಲ: ಸಮೀಪದ ವೀರಕಂಬ ಗ್ರಾಮದ ಗಣೇಶ್ ಕೋಡಿ ಎಂಬಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಬಡ ಕುಟುಂಬವೊಂದು ಮನೆ ಮತ್ತು ಸೊತ್ತುಗಳನ್ನು ಸಂಪೂರ್ಣವಾಗಿ ಕಳೆದುಕೊಂಡ ದುರ್ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ರಾಜೇಶ್ವರಿ ಹಾಗೂ ಅವರ ಇಬ್ಬರು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ದುರಂತ ಸಂಭವಿಸಿದ ಕೇವಲ ಎರಡು ದಿನಗಳಲ್ಲೇ ವಿಟ್ಲ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗರು ರಾಜೇಶ್ವರಿ ಅವರನ್ನು ಠಾಣೆಗೆ ಕರೆಯಿಸಿಕೊಂಡು ವೈಯಕ್ತಿಕ ನೆಲೆಯಲ್ಲಿ ಪ್ರಥಮ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವಿಟ್ಲ ಠಾಣಾ ಪೊಲೀಸರ ಈ ಸಹಾನುಭೂತಿ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ಅದೇ ರೀತಿ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ, ಕರ್ನಾಟಕ ರಾಜ್ಯ ದಕ್ಷಿಣ ಕೇಂದ್ರ ಕಚೇರಿ, ವಿಟ್ಲ ಇವರ ಕೃಷಿ ಕಾರ್ಮಿಕ ರೈತ ಯೋಜನೆಯಡಿ ರಾಜೇಶ್ವರಿ ಅವರಿಗೆ ಸಹಾಯಧನವನ್ನು ನೀಡುವ ಮೂಲಕ ಸಂಕಷ್ಟದ ವೇಳೆಯಲ್ಲಿ ಕೈಜೋಡಿಸಿದೆ.
ಈ ದುರಂತದ ನಂತರ ಹೃದಯವಂತರು ಒಬ್ಬೊಬ್ಬರಾಗಿ ಮುಂದೆ ಬರುತ್ತಿದ್ದು, ರಾಜೇಶ್ವರಿ ಅವರ ಕುಟುಂಬಕ್ಕೆ ಆರ್ಥಿಕ ಹಾಗೂ ಮಾನವೀಯ ನೆರವು ನೀಡುತ್ತಿದ್ದಾರೆ. ಸಮಾಜದ ವಿವಿಧ ವಲಯಗಳಿಂದ ವ್ಯಕ್ತವಾಗುತ್ತಿರುವ ಈ ಸಹಕಾರ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆಶಾಕಿರಣವಾಗಿದೆ.

























