ಉಳ್ಳಾಲ: ಸುಸೈಡ್ ಪಾಯಿಂಟ್ ಆಗಿ ಗುರುತಿಸಿಕೊಂಡಿದ್ದ ನೇತ್ರಾವತಿ ಸೇತುವೆಯ ತಡೆಬೇಲಿ ವಾಹನ ಅಪಘಾತದಲ್ಲಿ ಮುರಿದು ಕೆಲವೇ ದಿನಗಳು ಆಗುವ ಮುನ್ನವೇ ವ್ಯಕ್ತಿಯೋರ್ವರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ, ಅವರನ್ನು ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಪಂಪ್ ವೆಲ್ ನಾಗುರಿ ನಿವಾಸಿ ವಯಸ್ಕರೊಬ್ಬರು ರವಿವಾರ ನದಿಗೆ ಸೇತುವೆಯಿಂದ ಹಾರಿದ್ದರು. ಕೆಳಗಡೆ ಮೀನುಗಾರಿಕೆಯಲ್ಲಿ ನಿರತರಾಗಿದ್ದವರು ತಕ್ಷಣವೇ ನದಿಗೆ ಹಾರಿ ವ್ಯಕ್ತಿಯನ್ನು ದೋಣಿಗೆ ಎಳೆದು ಬಳಿಕ ಪ್ರಾಥಮಿಕ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನೇತ್ರಾವತಿ ಸೇತುವೆಗೆ ಅಳವಡಿಸಲಾದ ಬೇಲಿ ವಾಹನವೊಂದರ ಅಪಘಾತದಿಂದ ಮುರಿದು ಹೋಗಿತ್ತು.
ಲಕ್ಷಾಂತರ ವ್ಯಯಿಸಿ ನಿರ್ಮಿಸಿದ ತಡೆಬೇಲಿಯ ದುರಸ್ತಿಗೆ ಇಲಾಖೆಗಳು ಮುಂದಾಗಲಿಲ್ಲ. ಇದೀಗ ಅಲ್ಲಿಂದಲೇ ವ್ಯಕ್ತಿ ಹಾರಿರುವ ಶಂಕೆಯನ್ನು ಮೀನುಗಾರರು ವ್ಯಕ್ತಪಡಿಸಿದ್ದಾರೆ.
ಮೀನುಗಾರರಾದ ಜಮಾಲ್, ಇದಿನಬ್ಬ ಮತ್ತು ಮೈಯ್ಯದಿ ಎಂಬುವ ಮೀನುಗಾರರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಹನೀಫ್ ಮತ್ತು ಉಳ್ಳಾಲ ಠಾಣಾ ಎಸ್. ಐ ಜತೆಗಿದ್ದರು.



























