ಪುತ್ತೂರು: ಕೋಳಿ ಅಂಕ ನಡೆಸುತ್ತಿದ್ದವರ ಮೇಲೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಮಣಿಕ್ಕಳದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಉಪ-ನಿರೀಕ್ಷಕ ಸುತೇಶ್ ಕೆ.ಪಿ. ಅವರ ನೇತೃತ್ವದಲ್ಲಿ, ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಪೊಲೀಸ್ ತಂಡ ಸಂಜೆ ವೇಳೆ ಮಣಿಕ್ಕಳ ಪ್ರದೇಶಕ್ಕೆ ಬಂದಾಗ, ಮಾರ್ಗದ ಬದಿಯಲ್ಲಿ ಜೋರಾಗಿ ಕೋಳಿ ಕೋಗುವ ಶಬ್ದ ಕೇಳಿಸಿತು.
ಅನುಮಾನಗೊಂಡ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ, ಜನರು ಗುಂಪಾಗಿ ಸೇರಿ ಎರಡು ಕೋಳಿಗಳನ್ನು ಕಾಲಿಗೆ ಬಾಲುಗಳನ್ನು ಕಟ್ಟಿ ಕಾದಾಟಕ್ಕೆ ಬಿಡುತ್ತಿದ್ದುದನ್ನು ಗಮನಿಸಿದರು.
ಪೊಲೀಸರು ದಾಳಿ ನಡೆಸುತ್ತಿದ್ದಂತೆ ಅಲ್ಲಿ ಸೇರಿದ್ದ ಜನರು ಚದುರಿ ಓಡಿಹೋದರು. ಆದರೆ ಸ್ಥಳದಲ್ಲಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದರು.
ಬಂಧಿತ ಆರೋಪಿಗಳು:
- ಸತೀಶ್ (38), ಸಬಲೂರು ಮನೆ, ಕೊಯಿಲ ಗ್ರಾಮ, ಕಡಬ ತಾಲೂಕು
- ಮುರಳಿ (30), ಕಡಂಬು ಮನೆ, ವಿಟ್ಲಪಡ್ನೂರು ಗ್ರಾಮ, ಬಂಟ್ವಾಳ ತಾಲೂಕು
- ಮೋನಪ್ಪ ಕೆ (36), ಕುಡತ್ತಡ್ಕ ಮನೆ, ವಳಾಲು ಅಂಚೆ, ಬಜತ್ತೂರು ಗ್ರಾಮ, ಪುತ್ತೂರು ತಾಲೂಕು
ವಶಪಡಿಸಿಕೊಂಡ ವಸ್ತುಗಳು:
- ಐದು ಹುಂಜ ಕೋಳಿಗಳು
- ಎರಡು ಬಾಲುಗಳು
- ಪಣವಾಗಿ ಇಟ್ಟಿದ್ದ ₹2,300 ನಗದು
- ಎರಡು ಪ್ಲಾಸ್ಟಿಕ್ ಚೀಲಗಳು
- ಕೆಎ-21-ಎಲ್-0038 ನಂಬರಿನ ಮೋಟಾರ್ ಸೈಕಲ್
ಪೊಲೀಸರು ಪಂಚರ ಸಮ್ಮುಖದಲ್ಲಿ ಮಹಜರು ನಡೆಸಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.


























