ಉಳ್ಳಾಲ ಚೇಳೂರು ಪ್ರದೇಶದಲ್ಲಿ ರಸ್ತೆ ವಿಚಾರವಾಗಿ ಉಂಟಾದ ತಕರಾರು ಹಲ್ಲೆ ಪ್ರಕರಣವಾಗಿ ತಿರುಗಿ, ಪರಸ್ಪರ ದೂರುಗಳ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಉಳ್ಳಾಲ ಚೇಳೂರು ನಿವಾಸಿ ಡಯಾನಾ ಜೆಸ್ಟಿನ್ ಡಿಸೋಜಾ (51) ಅವರು ನೀಡಿದ ದೂರಿನ ಪ್ರಕಾರ, ತಮ್ಮ ಮನೆಗೆ ಹೋಗುವ ರಸ್ತೆಯ ವಿಚಾರವಾಗಿ ಸ್ಥಳೀಯ ಚರ್ಚ್ ಮತ್ತು ತಮ್ಮ ನಡುವೆ ತಕರಾರು ಇದ್ದು, ಮಾರ್ಚ್ 14 ರಂದು ಚರ್ಚ್ಗೆ ಸಂಬಂಧಿಸಿದವರು ಜೆಸಿಬಿ ಮೂಲಕ ರಸ್ತೆ ಕಾಮಗಾರಿ ನಡೆಸಿ ಮನೆಗೆ ಹೋಗುವ ದಾರಿಯನ್ನು ಬಂದ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಡಯಾನಾ ಡಿಸೋಜಾ ಮತ್ತು ಅವರ ಮಕ್ಕಳು ಮನೆಗೆ ಹೋಗಲು ದಾರಿ ಬಿಡುವಂತೆ ಕೇಳಿಕೊಂಡಾಗ, ಜೆಸಿಂತಾ ಡಿಸೋಜಾ, ಜೆಸಿಂತಾ ಕ್ರಸ್ತಾ, ಅನಿಷಾ ಡಿಸೋಜಾ, ಹಿಲ್ಡಾ ಮೊಂತೇರೊ, ದೊರಾ ರೊಡ್ರಿಗಸ್, ಅಲೆನ್ ರೋಸ್ ಸೇರಿದಂತೆ ಇತರರು ಸೇರಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಡಯಾನಾ ಡಿಸೋಜಾ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 37/2026 ಪ್ರಕರಣವನ್ನು BNS ಕಲಂ 189(2), 191(2), 115(2), 382, 351(2) r/w 190 ಅಡಿಯಲ್ಲಿ ದಾಖಲಿಸಲಾಗಿದೆ.
ಇನ್ನೊಂದೆಡೆ, ಇದೇ ಘಟನೆಯ ಕುರಿತು ಜೆಸಿಂತಾ ಡಿಸೋಜಾ (54) ಅವರು ನೀಡಿದ ಪ್ರತಿದೂರಿನ ಪ್ರಕಾರ, ಮಾರ್ಚ್ 14 ರಂದು ಸಂಜೆ ಜೆಸಿಬಿ ಮೂಲಕ ರಸ್ತೆ ಕಾಮಗಾರಿ ನಡೆಯುತ್ತಿರುವಾಗ ಡಯಾನಾ ಡಿಸೋಜಾ ಅವರು ಕೆಲಸಕ್ಕೆ ತಡೆ ಒಡ್ಡಿ ತಮ್ಮ ಮೇಲೆ ಹಲ್ಲೆ ನಡೆಸಿ ಅವಾಚ್ಯವಾಗಿ ಬೈದಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ವಿನಿಲ್ ಎಂಬಾತನು ಕೂಡ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಜೆಸಿಂತಾ ಡಿಸೋಜಾ ಅವರು ಕೂಡ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಪ್ರತಿದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 38/2026 ಪ್ರಕರಣವನ್ನು BNS ಕಲಂ 352, 115(2), 118(1), 351(2) ಹಾಗೂ 3(5) ಅಡಿಯಲ್ಲಿ ದಾಖಲಿಸಲಾಗಿದೆ.
ಈ ಸಂಬಂಧ ಎರಡೂ ಪ್ರಕರಣಗಳ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
























