ಮಂಗಳೂರು, ಮಾ.18: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾನುವಾರುಗಳ ಕಳ್ಳತನ ಹಾಗೂ ಅಕ್ರಮ ಸಾಗಾಟ ನಡೆಸುತ್ತಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನಾಲ್ಕು ದನಗಳನ್ನು ರಕ್ಷಿಸಿ ಒಟ್ಟು ಸುಮಾರು ₹8.42 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾ.18 ರಂದು ಬೆಳಗ್ಗೆ ಸುಮಾರು 4:45 ಗಂಟೆಗೆ ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮದ ಸಸ್ತಾವು ಪ್ರದೇಶದಲ್ಲಿ ಸಂಶಯಾಸ್ಪದವಾಗಿ ಫಾರ್ಚೂನರ್ ಕಾರಿನಲ್ಲಿ ದನಗಳನ್ನು ಸಾಗಿಸುತ್ತಿರುವ ಬಗ್ಗೆ ಬಾತ್ಮಿದಾರರಿಂದ ಮಾಹಿತಿ ಲಭಿಸಿತು. ಈ ಮಾಹಿತಿ ಮೇರೆಗೆ ಎಸಿಪಿ ಶ್ರೀಕಾಂತ್ ಹಾಗೂ ಪಿಐ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಬಜಪೆ ಠಾಣೆಯ ಪಿಎಸ್ಐ ಶ್ರೀಮತಿ ಲತಾ ಹಾಗೂ ಸಿಬ್ಬಂದಿಗಳಾದ ರಾಜೇಶ್, ಚಿದಾನಂದ ಮತ್ತು ಪ್ರಕಾಶ್ ದಾಳಿ ನಡೆಸಿದರು.
ದಾಳಿಯ ವೇಳೆ ದನಗಳ ಕಾಲುಗಳನ್ನು ಕಟ್ಟಿ ಹಿಂಸಾತ್ಮಕವಾಗಿ ಕಾರಿನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಲಾಯಿತು. ಪೊಲೀಸರು ಸ್ಥಳದಿಂದ ನಾಲ್ಕು ದನಗಳು, ಫಾರ್ಚೂನರ್ ಕಾರು (ನಂ. DL 10 CE 6227), ಒಂದು ತಲವಾರ್ ಹಾಗೂ ಒಂದು ಕಬ್ಬಿಣದ ರಾಡ್ ಅನ್ನು ವಶಪಡಿಸಿಕೊಂಡರು. ಆರೋಪಿಗಳು ಕಾರು ಹಾಗೂ ಮಾಲುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.
ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ 63/2026 ಅಡಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ ಕಲಂ 303(2), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಕಲಂ 4, 5, 12, ಪ್ರಿವೆನ್ಷನ್ ಆಫ್ ಕ್ರುವೆಲ್ಟಿ ಟು ಅನಿಮಲ್ಸ್ ಆಕ್ಟ್ 1960ರ ಕಲಂ 11(A), 11(D), ಇಂಡಿಯನ್ ಮೋಟಾರ್ ವಾಹನಗಳ ಕಾಯ್ದೆ 1988ರ ಕಲಂ 192(A) ಹಾಗೂ ಆರ್ಮ್ಸ್ ಆಕ್ಟ್ 1959ರ ಕಲಂ 4, 25(1B)(b) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ.
ಪರಾರಿಯಾಗಿರುವ ಆರೋಪಿಗಳನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.


























